ಕೊಪ್ಪಳ: ಕೋಳಿ ಕಳ್ಳತನಕ್ಕೆ ಯತ್ನಿಸಿದ ಅಪರಾಧಿಗೆ 2 ವರ್ಷ ಕಾರಾಗೃಹ ಶಿಕ್ಷೆ ಹಾಗೂ 2,000 ರೂ. ದಂಡ ವಿಧಿಸಿ ಗಂಗಾವತಿಯ 1ನೇ ಹೆಚ್ಚುವರಿ ಸಿ.ಜೆ. ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಮೇಘಾ ಸೋಮಣ್ಣನವರ್ ಅ.18ರಂದು ತೀರ್ಪು ನೀಡಿದ್ದಾರೆ.
ಮಂಜುನಾಥ ಭಜಂತ್ರಿ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ, 2020ರ ಅ.25ರಂದು ಕನಕಗಿರಿ ತಾಲೂಕಿನ ಬಂಕಾಪುರ ರಸ್ತೆ ಪಕ್ಕದ ಜಮೀನೊಂದರ ಮನೆಯಲ್ಲಿ ಕಳ್ಳತನ ಮಾಡಲು ತೆರಳಿದ್ದ ಹಣ, ಆಭರಣ ಸೇರಿ ಏನೂ ದೊರೆಯದ್ದರಿಂದ ಶೆಡ್ ನಲ್ಲಿದ್ದ ಕೋಳಿ ಕಳ್ಳತನಕ್ಕೆ ಯತ್ನಿಸಿದ್ದ. ಸದ್ದು ಕೇಳಿ ಎಚ್ಚೆತ್ತ ನೆರೆಯ ಹೊಲದಲ್ಲಿದ್ದವರು ಸ್ಥಳಕ್ಕೆ ಧಾವಿಸಿ, ಆರೋಪಿಯನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಕನಕಗಿರಿ ಪೊಲೀಸ್ ಠಾಣೆಯ ಪಿಎಸ್ಐ ಕಾಸೀಂಸಾಬ್ ಹಾಗೂ ಎಎಸ್ಐ ಶರಣಪ್ಪ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.



