ಉಡುಪಿ : ಸುಳ್ಳು ಮಾಹಿತಿ ನೀಡಿ ವ್ಯಕ್ತಿಯೊರ್ವರ ಖಾತೆಯನ್ನು ನಿಯಂತ್ರಣಕ್ಕೆ ಪಡೆದು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಉಡುಪಿ ಸೈಬರ್ ಕ್ರೈಮ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಹೆಜಮಾಡಿ ಶಿವ ನಗರ ನಿವಾಸಿ ಸಂದಿ ಯಾನೇ ಸಂದೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಆರೋಪಿಗಳಾದ ವಿಶಾಲ್ ಬಂಗೇರ ಹಾಗೂ ಕೋಲ್ಕತ್ತದ ರೋಹನ್ ಡೇ ಎಂಬವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ವಂಚನೆಗೆ ಒಳಗಾದವರು ಭದ್ರಾವತಿಯ ಕೂಡ್ಲಿಗೆರೆಯ ರುಮಾನ್ ಎನ್. ಇವರು ಉಡುಪಿಯ ಮಲ್ಪೆಯಲ್ಲಿ ಎ.ಎಂ.ಎಫ್. ಫಿಶ್ ಕಂಪನಿಯಲ್ಲಿ ಫಿಶ್ ಲೋಡಿಂಗ್ ಕೆಲಸವನ್ನು ಮಾಡಿಕೊಂಡಿದ್ದ ವೇಳೆ ಸಂಸ್ಥೆಯ ಮ್ಯಾನೇಜರ್ ಮಂಜೇಶ್ ಬಂಗೇರ ಮೂಲಕ ಹೆಜಮಾಡಿಯ ಸಂದೇಶ್ ಶೆಟ್ಟಿ ಮತ್ತು ವಿಶಾಲ್ ಎಂಬವರ ಪರಿಚಯವಾಗಿದೆ. ಈ ಸಂದರ್ಭ ತಮ್ಮ ಕೃತ್ಯಕ್ಕೆ ಮುಹೂರ್ತ ಇಟ್ಟ ಇವರು ನಾವು ಪ್ರತ್ಯೇಕ ಫಿಶ್ ಟ್ರಾನ್ಸ್ ಪೋರ್ಟ್ ಮಾಡುವವರಿದ್ದು, ಈ ವ್ಯವಹಾರಕ್ಕೆ ಬ್ಯಾಂಕ್ ಕರೆಂಟ್ ಅಕೌಂಟ್ ಗಳ ಅಗತ್ಯವಿದೆ ಎಂದು ತಿಳಿಸಿ, ಮ್ಯಾನೇಜರ್ ಮಂಜೇಶ್ ಬಂಗೇರ ಇವರ ಮಲ್ಪೆ ವಂಢಭಾಂಡೇಶ್ವರದ ಮನೆಗೆ “ಎಸ್ ಬಿ” ಎಂಟರ್ ಪ್ರೈಸಸ್ ನಲ್ಲಿ ಫಿಶ್ ಟ್ರಾನ್ಸ್ ಪೋರ್ಟ್ ಎಂಬುದಾಗಿ ಬ್ಯಾನರ್ ಅಳವಡಿಸಿ ಈ ಮನೆ ನಮ್ಮ ಕಛೇರಿ ಎಂಬುದಾಗಿ ನಂಬಿಸಿ ರುಮಾನ್ ಹೆಸರಲ್ಲಿ ಉಡುಪಿಯ ವಿವಿಧ ಬ್ಯಾಂಕ್ ಗಳಲ್ಲಿ ಖಾತೆ ಮಾಡಿಸಿ, ಅದರ ಪಾಸ್ ಪುಸ್ತಕ, ಚೆಕ್ ಪುಸ್ತಕ ಹಾಗೂ ಗೂಗಲ್ ಫೇ ಸ್ಪೀಕರ್ ರನ್ನು ಸಂದೇಶ್ ಶೆಟ್ಟಿ ಪಡೆದುಕೊಂಡಿದ್ದ. ನಂತರ ಇನ್ನೊರ್ವ ಆರೋಪಿ ವಿಶಾಲ್ ರುಮಾನ್ ಅವರನ್ನು ಕೋಲ್ಕತ್ತಾಕ್ಕೆ ಕರೆದುಕೊಂಡು ಹೋಗಿ ಅಲ್ಲಿ ರೋಹನ್ ಡೇ ಎಂಬಾತನೊಂದಿಗೆ ಸೇರಿಕೊಂಡು, ನಾಲ್ಕು ದಿನ ಬೇರೆ ಬೇರೆ ಲಾಡ್ಜ್ ಗಳ ಕೊಠಡಿಗಳಲ್ಲಿ ಇದ್ದು, ರುಮಾನ್ ರವರ ಮೊಬೈಲ್ ಗೆ ಬರುವ ಒಟಿಪಿ ಗಳನ್ನು ಪಡೆಯುವುದಲ್ಲದೆ, ಆರೋಪಿಗಳು ತಮ್ಮ ಮೊಬೈಲ್ ಗೆ ಬರುತ್ತಿದ್ದ ವಿಡಿಯೋ ಕಾಲ್ ಗಳಿಗೆ ರುಮಾನ್ ಮುಖವನ್ನು ತೋರಿಸಿ ಅವರು ಮಾತನಾಡಿಸುತ್ತಿದ್ದರು, ಈ ಮಧ್ಯೆ ರುಮಾನ್ ತಾನು ಊರಿಗೆ ಹೋಗಬೇಕು ಹಣ ಬೇಕು ಎಂದಾಗ ಆರೋಪಿಗಳು ಹಲ್ಲೆ ನಡೆಸಿದ್ದಲ್ಲದೆ ನಾವು ಹೇಳಿದಾಗೆ ನೀನು ಕೇಳದಿದ್ದರೆ ನಿನಗೆ ಗತಿ ಕಾಣಿಸುತ್ತೇವೆ ಎಂದು ಬೆದರಿಕೆಯೊಡ್ಡಿದ್ದರು.
ಊರಿಗೆ ಬಂದ ಬಳಿಕ ಸಂಶಯಗೊಂಡ ರುಮಾನ್ ತನ್ನಲ್ಲಿ ಖಾತೆ ಮಾಡಿಕೊಂಡಿದ್ದ ಬ್ಯಾಂಕ್ ಗಳಿಗೆ ಕರೆ ಮಾಡಿ ವಿಚಾರಿಸಿದಾಗ ತನ್ನ ಕರೆಂಟ್ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಆಗಿರುವುದು ತಿಳಿದಿದೆ.
ಆರೋಪಿಗಳಾದ ಹೆಜಮಾಡಿ ಸಂದೇಶ್ ಶೆಟ್ಟಿ, ವಿಶಾಲ್ ಹಾಗೂ ರೋಹನ್ ಇವರುಗಳು ಘೋರವಾದ ಆರ್ಥಿಕ ಅಪರಾಧ ನಡೆಸಲು ದೂರುದಾರ ರುಮಾನ್ ರವರನ್ನು ನಂಬಿಸಿ, “ಎಸ್ ಬಿ” ಎಂಟರ್ ಪ್ರೈಸಸ್ ಎಂಬ ಸಂಸ್ಥೆಯ ಹೆಸರಲ್ಲಿ ಬ್ಯಾಂಕಿನ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡುವಂತೆ ಉತ್ತೇಜಿಸಿ ರುಮಾನ್ ಕರೆಂಟ್ ಖಾತೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದು, ಆ ಮೂಲಕ ಅಪರಿಚಿತರಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿ, ಆ ಹಣವನ್ನು ರುಮಾನ್ ಹೆಸರಲ್ಲಿರುವ ಎಸ್ ಬಿ ಎಂಟರ್ ಪ್ರೈಸಸ್ ಕರೆಂಟ್ ಖಾತೆಯಲ್ಲಿ ವರ್ಗಾವಣೆ ಮಾಡಿ ಖಾತೆಯನ್ನು ದುರುಪಯೋಗ ಪಡಿಸಿ ವಂಚಿಸಿ ದ್ರೋಹ ಎಸಗಿರುವ ಬಗ್ಗೆ ಉಡುಪಿ ಸೈಬರ್ ಕ್ರೈಮ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಮುಖ ಆರೋಪಿ ಹೆಜಮಾಡಿ ಸಂದೇಶ್ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.



