ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಮೀಪ ಮಹಿಳೆಯೊಬ್ಬರಿಗೆ ತನ್ನ ಗಂಡ ಚಿನ್ನಾಭರಣಗಳನ್ನು ತೆಗೆದುಕೊಂಡು ವಂಚನೆ ಮಾಡಿ ನಂತರ ಇನ್ನೊಂದು ಮದುವೆಯಾದ ಘಟನೆ ನಡೆದಿದೆ.
ಮಂಗಳೂರು ನಿವಾಸಿ ಅಮ್ರೀನ್ ಎಂಬವರಿಗೆ ವಂಚನೆಯಾಗಿದೆ.
ವಂಚನೆ ಮಾಡಿದ ಆರೋಪಿ ಆದಿಲ್ ಇಬ್ರಾಹಿಂ ಎಂದು ತಿಳಿಯಲಾಗಿದೆ.
ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಅಮ್ರೀನ್, ಮಂಗಳೂರು ಮತ್ತು 1 ನೇ ಆರೋಪಿ ಆದಿಲ್ ಇಬ್ರಾಹಿಂ ಮದುವೆ ದಿನಾಂಕ 04/09/2013 ರಂದು ಮಂಗಳೂರು ಬೋಳಾರ್ ಶಾದಿ ಮಹಲ್ ಎಂಬಲ್ಲಿ ಇಸ್ಲಾಂ ಷರಿಯತ್ ಪ್ರಕಾರ ನಡೆದಿರುತ್ತದೆ. ಮದುವೆ ಸಮಯದಲ್ಲಿ ಪಿರ್ಯಾದಿದಾರರ ಮನೆಯವರು 60 ಪವನ್ ಚಿನ್ನದ ಆಭರಣ ಮತ್ತು ಗೃಹ ಉಪಯೋಗಿ ಸಲಕರಣೆಗಳನ್ನು ನೀಡಿ ಅದ್ದೂರಿ ಮದುವೆ ಮಾಡಿಕೊಟ್ಟಿದ್ದು, ಉಡುಗೊರೆಯಾಗಿ ಸುಮಾರು 10 ಪವನ್ ಚಿನ್ನವನ್ನು ಕೊಟ್ಟಿದ್ದು, ಮದುವೆಯ ಸಂಪೂರ್ಣ ಖರ್ಚ ರೂಪಾಯಿ 8,00,000/- ವನ್ನು ಪಿರ್ಯಾದಿದಾರರ ತಂದೆ ಭರಿಸಿರುತ್ತಾರೆ. ಮದುವೆಯಾದ ನಂತರ ಪಿರ್ಯಾದಿದಾರರು 1ನೇ ಆರೋಪಿ ಜೊತೆಯಲ್ಲಿ ಬ್ರಹ್ಮಾವರ ಆಕಾಶವಾಣಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಸಂಸಾರ ಮಾಡುತ್ತಿದ್ದು, ಮದುವೆಯಾದ 4ನೇ ದಿವಸದಲ್ಲಿ ಆರೋಪಿತರಾದ 1. ಆದಿಲ್ ಇಬ್ರಾಹಿಂ, 2. ಹೆಚ್ ಇಬ್ರಾಹಿಂ ಸಾಹಿಬ್, 3. ಇರ್ಷಾದ್ ಬಾನು, 4. ಅಲ್ಫಿಯಾ,5. ಜಾಫರ್ ಇವರು ನಮಗೆ ಸಾಲ ಇದೆ ಅದನ್ನು ತೀರಿಸಲು ನಿನ್ನಲ್ಲಿರುವ ಬಂಗಾರವನ್ನು ಕೊಡು ಎಂದು ತಿಳಿಸಿದ್ದು, ಪಿರ್ಯಾದಿದಾರರು ಅವರ ನಯವಾದ ಮಾತನ್ನು ನಂಬಿ ಅವರ 10 ಪವನ್ ಚಿನ್ನಾಭರಣವನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸಾಲ ತೀರಿಸಲು ಪಡೆದುಕೊಂಡಿರುತ್ತಾರೆ. ಪುನಃ 2 ತಿಂಗಳಲ್ಲಿ 10 ಪವನ್ ನ ನೆಕ್ಲೆಸ್ ಅಡವಿರಿಸಿ ಹಣ ಪಡೆದುಕೊಂಡಿರುತ್ತಾರೆ. ಆರೋಪಿ 4 ಮತ್ತು 5ನೇ ಯವರು ಅವರ ಸಾಲಗಾರರನ್ನು ಪಿರ್ಯಾದಿದಾರರು ವಾಸವಿರುವ ಮನೆಗೆ ಕಳುಹಿಸಿ ಮಾನಸಿಕ ಕಿರುಕುಳ ಕೊಟ್ಟಿರುವುದಲ್ಲದೇ ಮೋಸದಿಂದ 40 ಗ್ರಾಂ ಚಿನ್ನ ಮತ್ತು 2,50,000/- ಹಣ ಪಡೆದುಕೊಂಡಿದ್ದು, ಈವರೆಗೆ ಹಿಂತಿರುಗಿಸಿರುವುದಿಲ್ಲ. ಇದಾದ 8 ತಿಂಗಳ ನಂತರ 1ನೇ ಆರೋಪಿ ಪಿರ್ಯಾದಿದಾರರು ಕೆಲವು ಚಿನ್ನಾಭರಣವನ್ನು ಮಾರಾಟ ಮಾಡಿ ಹಾಗೂ ಪಿರ್ಯಾದಿದಾರರ ಅಕ್ಕನ 120 ಗ್ರಾಂ ಚಿನ್ನವನ್ನು ಅಡವಿರಿಸಿ ಬ್ರಹ್ಮಾವರದ ಮೀನಾ ಅನ್ಮೊಲ್ ಎಂಬಲ್ಲಿ ಮನೆ ಖರೀದಿ ಮಾಡಿದ್ದು, ಮನೆಯು ಪಿರ್ಯಾದಿದಾರರ ಮತ್ತು 1ನೇ ಆರೋಪಿತನ ಹೆಸರಿನಲ್ಲಿದ್ದುರಿಂದ 3ನೇ ಆರೋಪಿ ಪಿರ್ಯಾದಿದಾರರನ್ನು ದ್ವೇಷ ಮಾಡಲು ಪ್ರಾರಂಭಿಸಿ 1ನೇ ಆರೋಪಿತನಿಂದ ಸಂಬಂಧವನ್ನು ಮುರಿಯಲು ಪ್ರಯತ್ನಸಿರುತ್ತಾರೆ. ಪಿರ್ಯಾದಿದಾರರು 1ನೇ ಆರೋಪಿತನ ಬೇಡಿಕೆಯಂತೆ ಸ್ನೇಹಿತರಿಂದ ಮತ್ತು ಸಂಬಂಧಿಕರಿಂದ ಸುಮಾರು 8 ಲಕ್ಷ ಹಣವನ್ನು 1ನೇ ಆರೋಪಿತನಿಗೆ ನೀಡಿರುತ್ತಾರೆ. ಹೀಗಿರುತ್ತಾ 1ನೇ ಆರೋಪಿ ಪಿರ್ಯಾದಿದಾರರ ಗಮನಕ್ಕೆ ಬಾರದಂತೆ ಮೋಸದಿಂದ ದಿನಾಂಕ 03/01/2025 ರಂದು 2ನೇ ಮದುವೆ ಆಗಿ ದಿನಾಂಕ 04/01/2025 ರಂದು 2ನೇ ಹೆಂಡತಿಯೊಂದಿಗೆ ದುಬೈಗೆ ಹೋಗಿರುವುದಾಗಿ ಪಿರ್ಯಾದಿದಾರರಿಗೆ ತಿಳಿದು ಬಂದಿದ್ದು, ಈ ಬಗ್ಗೆ ಪಿರ್ಯಾದಿದಾರರು 1ನೇ ಆರೋಪಿತನಿಗೆ ಕರೆ ಮಾಡಿ ಕೇಳಿದಾಗ ನಾನು ಮದುವೆ ಆಗಿರುತ್ತೇನೆ ನಿನಗೆ ನಾನು ತಲಾಕ್ ನೀಡುತ್ತೇನೆ ಎಂದು ಹೇಳಿ ಮೂರು ಬಾರಿ ತಲಾಕ್ ಉಚ್ಚರಿಸಿರುವುದಾಗಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2025 ಕಲಂ: 85, 318(2), 3(5) BNS & 3, 4 D.P Act & 3, 4 The Muslim Women (Protection of Rights on Marriage) Act 2019 ರಂತೆ ಪ್ರಕರಣ ದಾಖಲಾಗಿರುತ್ತದೆ.