ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದ ಆ್ಯಸಿಡ್ ದಾಳಿ ಮತ್ತು ದರೋಡೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣದ ಸೂತ್ರಧಾರನೇ ಚಿನ್ನದಂಗಡಿ ಮಾಲೀಕನಾಗಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್ ಎಂಬಾತ ಕ್ಯಾತನಹಳ್ಳಿಯಲ್ಲಿ “ಮಹಾಲಕ್ಷ್ಮಿ ಜುವೆಲರಿ” ಎಂಬ ಚಿನ್ನದ ಅಂಗಡಿ ನಡೆಸುತ್ತಿದ್ದ. ಕೆಲ ದಿನಗಳ ಹಿಂದೆ ತನ್ನ ಅಂಗಡಿಗೆ ದುಷ್ಕರ್ಮಿಗಳು ನುಗ್ಗಿ ಮುಖಕ್ಕೆ ಆ್ಯಸಿಡ್ ಎರಚಿ, ಅಂಗಡಿಯಲ್ಲಿದ್ದ ಸುಮಾರು 170 ಗ್ರಾಂ ಚಿನ್ನ ಹಾಗೂ 8 ಕೆಜಿ ಬೆಳ್ಳಿಯನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಆತ ಪೊಲೀಸರಿಗೆ ದೂರು ನೀಡಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಕೆಲವು ಅನುಮಾನಾಸ್ಪದ ಸಂಗತಿಗಳು ಗೋಚರಿಸಿವೆ. ಅಂಗಡಿಯಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿರುವುದು ಮತ್ತು ಯಾವುದೇ ಸ್ಪಷ್ಟ ಸಾಕ್ಷ್ಯ ಸಿಗದಿರುವುದು ತನಿಖೆಯನ್ನು ಗೊಂದಲಕ್ಕೀಡಾಗಿಸಿತ್ತು.
ಆದರೆ ಜಿತೇಂದ್ರನ ಮುಖದ ಗಾಯದ ಸ್ವರೂಪ ಪೊಲೀಸರಲ್ಲಿ ಅನುಮಾನ ಹುಟ್ಟಿಸಿತು. ಆ್ಯಸಿಡ್ ದಾಳಿಯಲ್ಲಿ ಸಾಮಾನ್ಯವಾಗಿ ಕಣ್ಣು ಸೇರಿದಂತೆ ಮುಖದ ಭಾಗಗಳಿಗೆ ಗಂಭೀರ ಹಾನಿಯಾಗುತ್ತದೆ. ಆದರೆ ಇಲ್ಲಿ ಮುಖಕ್ಕೆ ರಾಸಾಯನಿಕ ಲೇಪನ ಮಾಡಿದಂತೆ ಕಾಣಿಸಿದ್ದು ತನಿಖೆಗೆ ಹೊಸ ದಿಕ್ಕು ನೀಡಿತು.
ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.



