ಬೆಳ್ತಂಗಡಿ : ಅಕ್ರಮವಾಗಿ ನಿರ್ಮಾಣ ಮಾಡಿದ ಕ್ಯಾಂಟಿನ್ ಒಳಗಡೆ ಅಕ್ರಮವಾಗಿ ವೇಶ್ಯಾವಟಿಕೆ ದಂಧೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದು ಹಲವರನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಕೆ.ಇ.ಬಿ ಕಚೇರಿ ಪಕ್ಕದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ಸುಂದರ್ ಶೆಟ್ಟಿ ಎಂಬವರು ಪವನ್ ಕ್ಯಾಂಟಿನ್ ಎಂಬ ಹೆಸರಿನಲ್ಲಿ ಕಳೆದ 20 ವರ್ಷಗಳಿಂದ ನಡೆಸುತ್ತಿದ್ದರು. ಈ ಕ್ಯಾಂಟಿನ್ ಭಾನುವಾರ ಮಾತ್ರ ರಜೆ ಇದ್ದು, ಈ ಸಮಯದಲ್ಲಿ ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ ಕ್ಯಾಂಟಿನ್ ಒಳಗಡೆ ಬೆಡ್ ರೂಂ, ಶೌಚಾಲಯ ವ್ಯವಸ್ಥೆ ಮಾಡಿಕೊಂಡು ಮಹಿಳೆಯನ್ನು ಕರೆದುಕೊಂಡು ಬಂದು ಹಣ ಮಾಡುವ ಉದ್ದೇಶದಿಂದ ಗಿರಾಕಿಗಳನ್ನು ಕರೆಸಿ ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ.10 ರಂದು ಸಂಜೆ 5 ಗಂಟೆಗೆ ಪವನ್ ಕ್ಯಾಂಟಿನ್ ಮೇಲೆ ಪೊಲೀಸರು ದಾಳಿ ಮಾಡಿದಾಗ ವೇಶ್ಯಾವಟಿಕೆ ಪ್ರಕರಣ ಬೆಳಕಿಗೆ ಬಂದಿದೆ.
ಕ್ಯಾಂಟಿನ್ ಒಳಗಡೆ ಮಾಲೀಕ ಸುಂದರ್ ಶೆಟ್ಟಿ(55), ಗಿರಾಕಿಗಳಾದ ಬೆಳ್ತಂಗಡಿ ತಾಲೂಕಿನ ನಾವೂರು ನಿವಾಸಿ ಹುಸ್ಮಾನ್(38), ಬೆಳ್ತಂಗಡಿ ತಾಲೂಕಿನ ತಣ್ಷಿರುಪಂತದ ಗ್ರಾಮದ ಕಲ್ಲೇರಿ ನಿವಾಸಿ ಹೈದಾರ್(45) ಮೂವರನ್ನು ಬಂಧಿಸಿದ್ದಾರೆ. 29 ವರ್ಷದ ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ದಾಳಿ ವೇಳೆ ಮೊಬೈಲ್ ಫೋನ್, 5 ಸಾವಿರ ಹಣ, ನಿರೋಧ್ ಗಳು ಪತ್ತೆಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.




