ರಸ್ತೆ ಬದಿ ಹೂ ಖರೀದಿಸುವ ಮುನ್ನ ಎಚ್ಚರ ವಹಿಸಿ…
ಉಡುಪಿ : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಭರ್ಜರಿ ಹೂ ಮಾರಾಟ ನಡೆಯುತ್ತಿದೆ.ಹೊರ ಜಿಲ್ಲೆಯ ಹಲವು ಮಾರಾಟಗಾರರು ಕಳೆದ ಮೂರು ದಿನಗಳಿಂದ ಠಿಕಾಣಿ ಹೂಡಿ ಹೂ ಮಾರಾಟ ಮಾಡುತ್ತಿದ್ದಾರೆ.ಇದೇವೇಳೆ ಎಸೆದಿರುವ ಹಾಳಾದ ಹೂವನ್ನು ತಂಡವೊಂದು ಸಂಗ್ರಹಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ನಗರದ ಮಾರುಥಿ ವೀಥಿಕಾದಲ್ಲಿ ಕಂಡುಬಂದಿತು. ಸಾರ್ವಜನಿಕರಿಂದ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು, ಹೂವು ಮಾರಾಟಗಾರರನ್ನು ತರಾಟೆ ತೆಗೆದುಕೊಂಡು ವ್ಯಾಪಾರವನ್ನು ನಿಲ್ಲಿಸಿದರು. ಮಳೆ ಬಂದ ಕಾರಣ ಹೂವು ವ್ಯಾಪಾರ ಕುಸಿತ ಕಂಡ ಕಾರಣ ಕೆಲವು ವ್ಯಾಪರಿಗಳು ಹೂವುಗಳನ್ನು ಸಾರ್ವಜನಿಕರು ಮೂತ್ರಬಾಧೆ ತಿರಿಸಿಕೊಳ್ಳುವ ಸ್ಥಳದಲ್ಲಿ ಎಸೆದುಹೋಗಿದ್ದರು. ಮತ್ತೊಂದು ವ್ಯಾಪಾರಿ ತಂಡದವರು ಆ ಹೂವುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು.
ಹೊರ ಜಿಲ್ಲೆಯಿಂದ ಹೂವು ಮಾರಾಟಗಾರರು, ಹಬ್ಬ ಹರಿದಿನಗಳಲ್ಲಿ ಉಡುಪಿಗೆ ಬಂದು ನಗರದೆಲ್ಲೆಡೆ ವ್ಯಾಪಾರ ನಡೆಸುತ್ತಾರೆ. ಉಡುಪಿಯ ಜನತೆ ಹೂವುಗಳನ್ನು ಖರೀದಿಸಿ, ವ್ಯಾಪರಸ್ಥರು ಹಾಗೂ ಹೂವು ಬೆಳೆಗಾರರನ್ನು ಬೆಂಬಲಿಸುತ್ತಿದ್ದಾರೆ. ಅಶುಚಿತ್ವದ ಸ್ಥಳದಲ್ಲಿ ವ್ಯಾಪಾರದಂತಹ ವಿಚಾರಗಳಿಂದ ಉಡುಪಿಯ ಗ್ರಾಹಕರನ್ನು ವಂಚಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಇಂತಹವರ ಕುಕೃತ್ಯಗಳಿಂದ ಶ್ರದ್ದೆ ಭಕ್ತಿಯಿಂದ ನಡೆಯುವ ಆಚರಣೆಗಳಿಗೆ ಧಕ್ಕೆ ಬರುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.



