ಬೆಂಗಳೂರು: ರಾಜಾಜಿನಗರದ ಸ್ಪಂದನ ಸೇವಾ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಉಡುಪಿ ಜಿಲ್ಲೆಯ ಒಬ್ಬ ಪತ್ರಕರ್ತರಿಗೆ ನೀಡುವ “ಯಶೋ ಮಾಧ್ಯಮ” ಪ್ರಶಸ್ತಿಯನ್ನು ಈ ಬಾರಿ ಉಡುಪಿ ಜಿಲ್ಲಾ ಪತ್ರಕರ್ತರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ವಿಜಯ ಕರ್ನಾಟಕ ಉಡುಪಿ ಜಿಲ್ಲಾ ವರದಿಗಾರರಾದ ಸುಬ್ರಮಣ್ಯ.ಜಿ ಕುರ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಂದನಾ ಸೇವಾ ಸಂಸ್ಥೆಯ ಖಜಾಂಚಿ ರಜನಿ.ವಿ. ಪೈ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನಾಂಕ 15-06-2026 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಉಡುಪಿ ಜಿಲ್ಲೆಯ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ “ಯಶೋ ಮಾಧ್ಯಮ-2026” ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಜನಾರ್ದನ್ ಕೊಡವೂರು,
ಕಲ್ಯಾಣಪುರದ ಶ್ರೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಾಮರಾಯ್ ಕಿಣಿ, ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ
ಸುಬ್ರಮಣ್ಯ ಕಾರಂತ್, ಉದ್ಯಾನವನ ವಿನ್ಯಾಸಗಾರರಾದ ಲೋಕೇಶ್ ಪೂಜಾರಿ, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ನ ಸಹಾಯಕ ಪ್ರಾಧ್ಯಾಪಕರಾದ ಡಾ.ಮರಿಯಾ ಪಾಯಸ್, ಸ್ಪಂದನಾ ಸೇವಾ ಸಂಸ್ಥೆಯ ಖಜಾಂಚಿ ಶ್ರೀಮತಿ ರಜನಿ ವಿ.ಪೈ, ಕಾರ್ಯದರ್ಶಿ ಸಂತೋಷ್ ಕಾಮತ್ ಉಪಸ್ಥಿತರಿರುವರು.ಹಾಗೆಯೇ ಕಲ್ಯಾಣಪುರ ಶ್ರೀವೆಂಕಟರಮಣ ದೇವಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿಯವರಿಗೆ ಸ್ಪಂದನಾ ಸೇವಾ ಸಂಸ್ಥೆಯಿಂದ ಗೌರವಿಸಲಾಗುವುದು ಎಂದು ರಜನಿ.ವಿ.ಪೈ ಹೇಳಿದರು.




