ಕಡಬ: ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಅನ್ಯಕೋಮಿನ ಯುವಕರು ಹಾಗೂ ಹಿಂದೂ ಯುವತಿಯೋರ್ವಳು ಪ್ರಯಾಣಿಸುತ್ತಿರುವ ಮಾಹಿತಿ ಮೇರೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಕಡಬದಲ್ಲಿ ಬಸ್ಸನ್ನು ತಡೆದು ನಿಲ್ಲಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಬಸ್ಸಿನಲ್ಲಿ ಮುಸ್ಲಿಂ ಸಮುದಾಯದ ಯುವಕರ ಜತೆ ಹಿಂದೂ ಯುವತಿ ಕುಳಿತುಕೊಂಡು ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಕಡಬದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬಸ್ ಅನ್ನು ತಡೆದು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೇ ಯುವತಿ ಮತ್ತು ಯುವಕರನ್ನು ಠಾಣೆಗೆ ಬರುವಂತೆ ತಿಳಿಸಿದ್ದಾರೆ.
ಆಗ ಬಸ್ಸಿನ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಖಾಸಗಿ ವಾಹನದಲ್ಲಿದ್ದವರು ಯುವತಿಯ ಜತೆ ಇದ್ದ ಯುವಕರನ್ನು ಕರೆದೊಯ್ಯಲು ಪ್ರಯತ್ನಿಸಿದಾಗ ಗೊಂದಲದ ವಾತಾವರಣ, ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೋಲಿಸರು ಮಧ್ಯಪ್ರವೇಶಿಸಿದ್ದು ಬಳಿಕ ಯುವಕರು, ಯುವತಿ ಹಾಗೂ ಅವರ ಜತೆಗಾರರು ಠಾಣೆಗೆ ತೆರಳಿ ಹೇಳಿಕೆ ಕೊಟ್ಟಿದ್ದು, ಪ್ರಕರಣ ಸುಖಾಂತ್ಯವಾಗಿದೆ.
ಮದುವೆಗೆ ತೆರಳಿದ್ದರು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಉದ್ಯೋಗದಲ್ಲಿರುವ ತಂಡ ಸುಬ್ರಹ್ಮಣ್ಯಕ್ಕೆ ತಮ್ಮ ಸಹೋದ್ಯೋಗಿಯ ಮದುವೆಗೆಂದು ಬಂದಿದ್ದು, ಅದರಲ್ಲಿ ಕೆಲವರು ಖಾಸಗಿ ವಾಹನದಲ್ಲಿ ತೆರಳಿದ್ದು, ಇನ್ನು ಕೆಲವರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೋಲಿಸ್ ವಿಚಾರಣೆಯ ವೇಳೆ ತಿಳಿದು ಬಂದಿದೆ.