Home Latest ದೊಡ್ಡಣಗುಡ್ಡೆಯಲ್ಲಿ ಬೃಹತ್ ಮಾವು ಮೇಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ…!!

ದೊಡ್ಡಣಗುಡ್ಡೆಯಲ್ಲಿ ಬೃಹತ್ ಮಾವು ಮೇಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ…!!

ಉಡುಪಿ: ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘದ ವತಿಯಿಂದ ಉಡುಪಿಯ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಇಂದು ಚಾಲನೆ ನೀಡಲಾಯಿತು.

ಮಲ್ಲಿಕಾ, ಕೇಸರ್, ಇಮಾಮ್ ಪಸಂದ್, ರಸಪುರಿ, ಸಿಂಧೂರ, ಸುಂದರಿ, ಆಲ್ಫೋನ್ಸೊ, ತೋತಾಪುರಿ, ಕಾಲಪ್ಪಾಡಿ, ಸಕ್ಕರೆಗುತ್ತಿ, ಮಲಗೋವಾ, ದಸೇರಿ ಮೊದಲಾದ ತಳಿಗಳ ಮಾವುಗಳ ಪ್ರದರ್ಶನ ಗಮನಸೆಳೆಯಿತು. ಮೊದಲ ದಿನವೇ ಗ್ರಾಹಕರು ಮುಗಿಬಿದ್ದು ಮಾವುಗಳನ್ನು ಖರೀದಿಸಿದರು.

ಮಾವು ಮೇಳಕ್ಕೆ ಚಾಲನೆ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂದಿನಿಂದ ನಾಲ್ಕು ದಿನಗಳ ಕಾಲ ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು ಮೇಳ ನಡೆಯಲಿದೆ.

12ರಿಂದ 15 ವಿವಿಧ ತಳಿಗಳ ಮಾವುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದ್ದು, ಮಾವು ಪ್ರಿಯರಿಗೆ ವಿವಿಧ ಮಾವಿನ ಹಣ್ಣುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.

ರಾಮನಗರ, ಮಂಡ್ಯ ಜಿಲ್ಲೆಯ ರೈತರು ಮಾವಿನ ಹಣ್ಣುಗಳ ಮಾರಾಟ ಮಾಡುತ್ತಿದ್ದು, ಗ್ರಾಹಕರು ಹಣ್ಣುಗಳನ್ನು ಖರೀದಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಹಿರಿಯ ಸಹಾಯಕ ನಿರ್ದೇಶಕರಾದ ಹೇಮಂತ್, ಎಚ್.ಕೆ. ಬೀಳಗಿ, ನಿರ್ದೇಶಕರಾದ ನಿದೀಶ್, ಗುರುಪ್ರಸಾದ್, ಸುನೀಲ್, ಪ್ರಗತಿಪರ ರೈತರಾದ ವಾಸು, ಸಿದ್ದರಾಜು ಉಪಸ್ಥಿತರಿದ್ದರು.