ಬ್ರಹ್ಮಾವರ: ಕಾಡೂರು ಗ್ರಾಮದ ತಂತ್ರಾಡಿ ಹೊಸ್ಕೆರೆ ನಿವಾಸಿ ಉಮೇಶ್ ಶೆಟ್ಟಿ (51) ಅವರ ಮನೆಯಲ್ಲಿ ಚಿನ್ನದ ಕರಿಮಣಿ ಸರ ಕಳುವಾಗಿರುವ ಘಟನೆ ವರದಿಯಾಗಿದೆ.
ಮುಂಬಯಿಯಲ್ಲಿ ವ್ಯವಹಾರ ನಡೆಸುತ್ತಿರುವ ಉಮೇಶ್ ಶೆಟ್ಟಿ ಅವರು ತಮ್ಮ ತಾಯಿ ಪಾರ್ವತಿ ಅವರ 38 ಗ್ರಾಂ ತೂಕದ, ಅಂದಾಜು 4 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಫೆಬ್ರವರಿ 16ರಂದು ಮನೆಯ ಕೋಣೆಯ ಡ್ರಾಯರ್ನಲ್ಲಿ ಇಟ್ಟಿದ್ದರು ಎನ್ನಲಾಗಿದೆ.
ಮನೆಯಲ್ಲಿ ವೃದ್ಧ ತಾಯಿ ಹಾಗೂ ತಂದೆ ಮಾತ್ರ ವಾಸವಾಗಿದ್ದು, ಉಮೇಶ್ ಶೆಟ್ಟಿ ಅವರು ತಿಂಗಳಿಗೊಮ್ಮೆ ಊರಿಗೆ ಬಂದು ತಾಯಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಇದೇ ವೇಳೆ ಏಪ್ರಿಲ್ 23ರಂದು ಪಾರ್ವತಿ ಅವರು ನಿಧನರಾಗಿದ್ದು, ಅಂತ್ಯಸಂಸ್ಕಾರದ ಕಾರ್ಯ ಮುಗಿಸಿ ಮೇ 1ರಂದು ಸಂಜೆ ಮನೆ ಪರಿಶೀಲಿಸಿದಾಗ ಡ್ರಾಯರ್ನಲ್ಲಿ ಇಟ್ಟಿದ್ದ ಕರಿಮಣಿ ಸರ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.





