ಕುಂದಾಪುರ: ಶುಕ್ರವಾರದ ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಸ್ಕ್ರೂ ಡ್ರೈವರ್ನಿಂದ ಹಲ್ಲೆ ಮಾಡಿದ ಘಟನೆ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಸಮೀಪ ನಡೆದಿದೆ.
ಪೊಲೀಸ್ ಮಾಹಿತಿಯಂತೆ, ಫಾರೂಕ್ ಮೊಹಮ್ಮದ್ (43) ಅವರು ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಪ್ರದೇಶದಲ್ಲಿರುವ ಜಿ.ಎಮ್. ಮುನ್ನಾ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮೇ 1ರಂದು ಮಧ್ಯಾಹ್ನ ಸುಮಾರು 1:30ರ ವೇಳೆಗೆ ಗುಲ್ವಾಡಿ ಮಸೀದಿಯಲ್ಲಿ ನಮಾಜ್ ಮುಗಿಸಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಪರಿಚಯದ ಮೊಹಮ್ಮದ್ ಸಿನಾನ್ @ ಚಿನ್ನು ಎಂಬಾತ ಸ್ಕೂಟಿಯಲ್ಲಿ ಬಂದು ರಸ್ತೆಯಲ್ಲಿ ಅಡ್ಡಗಟ್ಟಿದ್ದಾನೆ ಎನ್ನಲಾಗಿದೆ.
ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಫಾರೂಕ್ ಅವರ ಬೈಕ್ಗೆ ಕಾಲಿನಿಂದ ಒದ್ದು ಕೆಡವಿದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದಾರೆ. ಬಳಿಕ ಹೊಟ್ಟೆ ಹಾಗೂ ಬೆನ್ನಿಗೆ ತುಳಿದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಅಲ್ಲದೆ, ಸ್ಕೂಟಿಯಲ್ಲಿ ಇದ್ದ ಸ್ಕ್ರೂ ಡ್ರೈವರ್ನಿಂದ ತಲೆಗೆ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಸೀದಿಯಿಂದ ಜನರು ಬರುತ್ತಿರುವುದನ್ನು ಗಮನಿಸಿದ ಆರೋಪಿ, ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





