Home Karavali Karnataka ರಸ್ತೆ ದುರಸ್ತಿಯ ಬಗ್ಗೆ ರೊಚ್ಚಿಗೆದ್ದ ಮೂಡುಬೆಳ್ಳೆ ಗ್ರಾಮಸ್ಥರು…!!

ರಸ್ತೆ ದುರಸ್ತಿಯ ಬಗ್ಗೆ ರೊಚ್ಚಿಗೆದ್ದ ಮೂಡುಬೆಳ್ಳೆ ಗ್ರಾಮಸ್ಥರು…!!

6 ವಾರ ಕಳೆದರೂ ಮುಗಿಯದ ರಸ್ತೆ ಕಾಮಗಾರಿ : ವಾಹನ ಸವಾರರ ಪರದಾಟ

ಚಾಲಕರು, ವ್ಯಾಪಾರಿಗಳು, ಸಾರ್ವಜನಿಕರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ…!!

ಉಡುಪಿ : ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬೆಳ್ಳೆ ಪೇಟೆಯ ನಡುವೆ ಹಾದು ಹೋಗುತ್ತಿರುವ ಉಡುಪಿ- ಕಾರ್ಕಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಯಿಂದಾಗಿ ಪರಿಸರವಿಡೀ ಧೂಳುಮಯವಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದ ಆಗುತ್ತಿರುವ ತೊಂದರೆಗಳ ವಿರುದ್ಧ ಸಾರ್ವಜನಿಕರು, ರಿಕ್ಷಾ ಚಾಲಕರು, ವ್ಯಾಪಾರಿಗಳು ಶನಿವಾರ ಬೆಳ್ಳೆ ಚರ್ಚ್ ಸ್ವಾಗತ ಗೋಪುರದ ಎದುರು ಪ್ರತಿಭಟನೆ ನಡೆಸಿದರು.

ಬೆಳ್ಳೆ ಸಿಎ ಬ್ಯಾಂಕ್‌ನ ಅಧ್ಯಕ್ಷ ಬೆಳ್ಳೆ ಶಿವಾಜಿ ಎಸ್. ಸುವರ್ಣ ಮಾತನಾಡಿ, 6 ವಾರ ಕಳೆದರೂ ಡಾಮರೀಕರಣ ಕಾಮಗಾರಿ ಪೂರ್ತಿಯಾಗದೆ ಧೂಳುಮಯಗೊಂಡು ಸಾರ್ವ ಜನಿಕರಿಗೆ, ವ್ಯಾಪಾರಸ್ಥರಿಗೆ ತೊಂದರೆಯುಂಟಾಗುತ್ತಿದೆ ಎಂದರು.

ಈ ವೇಳೆ ರಸ್ತೆ ಬಂದ್ ಮಾಡಿ ಎಚ್ಚರಿಕೆ ನೀಡಲಾಯಿತು. ಸ್ಥಳಕ್ಕಾಗಮಿಸಿದ ಲೋಕೋ ಪಯೋಗಿ ಇಲಾಖೆಯ ಅಧಿಕಾರಿ ಸೋಮನಾಥ್ ಅವರನ್ನು ಬೆಳ್ಳೆ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸೋಮನಾಥ್ ಗುತ್ತಿಗೆದಾರರಿಗೆ ಸೂಚನೆ ನೀಡಿ ಎ.28 ರಂದು ಕಾಮಗಾರಿ ಪ್ರಾರಂಭಿಸಿ ಕೂಡಲೇ ಮುಗಿಸುವುದಾಗಿ ತಿಳಿಸಿದರು. ಸಾರ್ವಜನಿಕರು ಕೂಡಲೇ ಕಾಮಗಾರಿ ಮುಗಿಸದಿದ್ದಲ್ಲಿ ಮುಂದಿನ ವಾರ ರಸ್ತೆ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಇಲಾಖೆಯ ಅವೈಜ್ಞಾನಿಕ ಕಾಮಗಾರಿ ಯಿಂದಾಗಿ ಪ್ರತೀದಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಇಲಾಖಾಧಿಕಾರಿಗಳು ಕೂಡಲೇ ಗುತ್ತಿಗೆದಾರರಿಗೆ ಸೂಚನೆ ನೀಡಿ ರಸ್ತೆ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರ ಪರವಾಗಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮೂಡುಬೆಳ್ಳೆ ಕೇಂದ್ರ ಸ್ಥಳವಾಗಿರುವುದರಿಂದ ಉತ್ತಮ ಚರಂಡಿಯೊಂದಿಗೆ ಸಮರ್ಪಕ ರಸ್ತೆ ನಿರ್ಮಾಣವಾಗಬೇಕಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರ ಕಾಮಗಾರಿ ಪ್ರಾರಂಭಿಸಿ ಕಾಮಗಾರಿ ಪೂಣಗೊಳಿಸಲು ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ರಿಕ್ಷಾ ಚಾಲಕರು ಮತ್ತು ವ್ಯಾಪಾರಿಗಳು ಕೆಲ ಹೊತ್ತು ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ಸಿ.ಎ ಪ್ರಿತೇಶ್ ಡೇಸಾ, ಚಾರ್ಲ್ಸ್ ಕ್ವಾಡ್ರಸ್, ಬೆಳ್ಳೆ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್, ಮಾಜಿ ಜಿ.ಪಂ. ಸದಸ್ಯೆ ಐಡಾ ಗಿಬ್ಬಾ ಡಿ’ಸೋಜಾ, ಎ.ಜಿ.ಡಿಸೋಜಾ, ನಿರಂಜನ ರಾವ್ ಬೆಳ್ಳೆ, ರಿತೇಶ್ ಸುವರ್ಣ, ರಿಕ್ಷಾ ಚಾಲಕರು, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.