ಸಾಗರ: ಶಿವಮೊಗ್ಗ ಜಿಲ್ಲೆಯ ಆನಂದಪುರ-ಶಿಕಾರಿಪುರ ರಸ್ತೆಯ ಬೈರಾಪುರ ಸಮೀಪ ಟಿಪ್ಪರ್ ಮತ್ತು ಕಾರು ನಡುವೆ ಗುರುವಾರ ಮಧ್ಯರಾತ್ರಿ ಮುಖಾಮುಖಿ ಡಿಕ್ಕಿಯಾಗಿ ಕಾರಿನ ಚಾಲಕ ಹಾಗೂ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಶಿಕಾರಿಪುರದಿಂದ ಆನಂದಪುರ ಕಡೆ ತೆರಳುತ್ತಿದ್ದ ಟಿಪ್ಪರ್ ಆನಂದಪುರ ಕಡೆಯಿಂದ ಶಿಕಾರಿಪುರದ ಹಿತ್ಲ ಗ್ರಾಮಕ್ಕೆ ತೆರಳುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಮಹಮ್ಮದ್ ಹಾಗೂ ಫರೀನಾ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ನಾಲ್ವರಿಗೆ ಹಾಗೂ ಟಿಪ್ಪರ್ ಚಾಲಕನಿಗೆ ತೀವ್ರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶಿಕಾರಿಪುರ ತಾಲೂಕಿನ ಹಿತ್ಲ ಗ್ರಾಮದವರು ಗೋವಾದಲ್ಲಿನ ತಮ್ಮ ಸಂಬಂಧಿಕರ ಮನೆಯಲ್ಲಿ ಶುಭ ಕಾರ್ಯವನ್ನು ಮುಗಿಸಿ ಸ್ವಗ್ರಾಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.