Home Karavali Karnataka ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ವಿನೂತನ ಶೈಲಿಯ ಚಿಕಿತ್ಸೆಯಿಂದ ವಯಸ್ಸಾದ ಹೃದ್ರೋಗಿಗೆ ಜೀವದಾನ…!!

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ವಿನೂತನ ಶೈಲಿಯ ಚಿಕಿತ್ಸೆಯಿಂದ ವಯಸ್ಸಾದ ಹೃದ್ರೋಗಿಗೆ ಜೀವದಾನ…!!

ಮಂಗಳೂರು: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ವೈದ್ಯರ ತಂಡ ವಯಸ್ಸಾದ ಹೃದ್ರೋಗಿಗೆ ವಿನೂತನ ಶೈಲಿಯ ಚಿಕಿತ್ಸೆಯ ಮೂಲಕ ಜೀವದಾನ ನೀಡಿದ ಘಟನೆ ನಡೆದಿದೆ. ವೈದ್ಯರು ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಮತ್ತು ಗಮನಾರ್ಹ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಹೊನ್ನಾವರ (ಉತ್ತರ ಕನ್ನಡ) ನಗರ ಮೂಲದ 69 ವಯಸ್ಸಿನ ಹೃದ್ರೋಗಿಯು, ತೀವ್ರ ಎದೆ ನೋವು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ಶಾಸ್ತ್ರ‌ ತಜ್ಞ ಡಾ. ಪ್ರಭಾಕರ್ ರನ್ನು ಭೇಟಿ ಮಾಡಿ ತಮ್ಮ ಹೃದ್ರೋಗದ ಸಮಸ್ಯೆಗಳನ್ನು ವಿವರಿಸಿದರು. ರೋಗಿಯನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಿದಾಗ ವೈದ್ಯರು ರೋಗಿಯು ತೀವ್ರ ಹೃದ್ರೋಗ ಸಂಬಂಧಿತ ಕಾಯಿಲೆಗಳಿಂದ ಬಳಲುತಿದ್ದು, ಹೃದಯದ ಅಪದಮನಿಯಲ್ಲಿ ಕ್ಯಾಲ್ಸಿಯಂ ಕಣಗಳಿದ್ದು, ರಕ್ತದ ಚಲನವಲನಕ್ಕೆ ಅಡ್ಡಿ ಮಾಡುತ್ತಿತ್ತು. ಅದಲ್ಲದೆ ರೋಗಿಯು 10 ವರ್ಷದ ಹಿಂದೆ ಬೈಪಾಸ್ ಶಸ್ತ್ರ ಚಿಕಿತ್ಸೆಗೆ ಒಳಗೊಂಡಿದ್ದರು. ಈ ಕಾರಣ 2ನೇ ಬೈಪಾಸ್ ಶಸ್ತ್ರ ಚಿಕಿತ್ಸೆಯು ರೋಗಿಯ ಜೀವಕ್ಕೆ ಗಂಭೀರ ಸಮಸ್ಯೆ ಮತ್ತು ಅಪಾಯಕಾರಿಯಾಗಿತ್ತು. ತಕ್ಷಣ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಡಾ. ಪ್ರಭಾಕರ್‌ರವರು ಈ ಗಂಭೀರ ಸಮಸ್ಯೆ ಮತ್ತು ಜೀವಕ್ಕೆ ಅಪಾಯಕಾರಿಯಾಗುವ ಸವಾಲನ್ನು ಸ್ವೀಕರಿಸಿ, 1 1/2 ಗಂಟೆ ಅವಧಿಯ ವಿನೂತನ ಶೈಲಿಯ ಕ್ಲಿಷ್ಟಕರವಾದ ಅರ್ಬಿಟಲ್ ಅಥೆರೆಕ್ಟೆಮಿ ಚಿಕಿತ್ಸೆಯನ್ನು ನಿರ್ವಹಿಸಿ ಹೃದಯದಲ್ಲಿರುವ ಕ್ಯಾಲ್ಸಿಯಂ ಕಣಗಳನ್ನು ನಿರ್ಮೂಲಿಸಿ 2 ಸ್ಟೆಂಟ್‌ಗಳನ್ನು ಅಳವಡಿಸಿ ಸಾಮಾನ್ಯ ರಕ್ತ ಚಾಲನೆಗೆ ಅನುವುಮಾಡಿಕೊಟ್ಟರು.


ಈ ಚಿಕಿತ್ಸೆಗೆ ಆಸ್ಪತೆಯ ಹೃದ್ರೋಗ ತಜ್ಞರಾದ ಡಾ. ಪ್ರದೀಪ್ ಪಿರೇರಾ ಮತ್ತು ಡಾ. ಜೋಸ್ಟಲ್ ಪಿಂಟೋ ಸಹಕರಿಸಿದ್ದರು. ರೋಗಿಯು ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಏ.26 ರಂದು ಬಿಡುಗಡೆಗೊಂಡಿದ್ದಾರೆ.


ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಕುವೆಲ್ಲೋ ಅವರು ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ನೆರವೇರಿಸಲಾಗಿದೆ ಎಂದು ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.