Home Latest ಸಂಚಾರ ಪೊಲೀಸ್ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ : ಮೊಬೈಲ್ ಜಖಂ

ಸಂಚಾರ ಪೊಲೀಸ್ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ : ಮೊಬೈಲ್ ಜಖಂ

ಮಂಗಳೂರು : ನಗರದ ನಂತೂರು ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಏಪ್ರಿಲ್ 18ರಂದು ನಡೆದಿದೆ.

ಹಲ್ಲೆಯಿಂದ ಗಾಯಗೊಂಡ ಸಿಪಿಸಿ ಪ್ರವೀಣ್ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಪ್ರಿಲ್ 18 ರಂದು ಮಧ್ಯಾಹ್ನ 12:37ರ ಸುಮಾರಿಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯ ಹಲೇಷಾ, ಪ್ರವೀಣ್ ಮತ್ತು ಚಂಪಾ ಅವರು ನಂತೂರು ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಪದವು ಕಡೆಯಿಂದ ಬೈಕ್‌ನಲ್ಲಿ ಮಹಿಳೆಯೊಂದಿಗೆ ಬಂದ ಸವಾರನು, ‘ಫ್ರೀ ಲೆಫ್ಟ್’ (Free Left) ರಸ್ತೆಯಲ್ಲಿ ವಾಹನವನ್ನು ಅಡ್ಡಲಾಗಿ ನಿಲ್ಲಿಸಿದ್ದನು. ಇದರಿಂದ ಇತರ ವಾಹನಗಳಿಗೆ ಅಡಚಣೆಯಾಗುತ್ತಿರುವುದನ್ನು ಗಮನಿಸಿದ ಹಲೇಷಾ ಅವರು ಬೈಕನ್ನು ಮುಂದಕ್ಕೆ ಕೊಂಡು ಹೋಗುವಂತೆ ಸೂಚಿಸಿದರು.

ಇದರಿಂದ ಕೆರಳಿದ ಸವಾರನು ಪೊಲೀಸರನ್ನು “ಬೇವರ್ಸಿ”, “ನಾಯಿಗಳು” ಎಂದು ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಪ್ರಶ್ನಿಸಿದ ಸಿಪಿಸಿ ಪ್ರವೀಣ್ ಅವರ ಮುಖಕ್ಕೆ ಹೊಡೆದು ಗಾಯಗೊಳಿಸಿದ್ದಾನೆ. ಅಲ್ಲದೆ, ಅವರ ಕೈಯಲ್ಲಿದ್ದ ಸುಮಾರು ₹28,000 ಮೌಲ್ಯದ ಮೊಬೈಲ್ ಕಿತ್ತುಕೊಂಡು ನೆಲಕ್ಕೆ ಎಸೆದು ಜಖಂಗೊಳಿಸಿದ್ದಾನೆ. ಜೊತೆಯಲ್ಲಿದ್ದ ಮಹಿಳೆಯು ಕೂಡ ಪೊಲೀಸರಿಗೆ ಚಪ್ಪಲಿಯಲ್ಲಿ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾರ್ವಜನಿಕರು ಸಮಾಧಾನಪಡಿಸಲು ಯತ್ನಿಸಿದರೂ ಆರೋಪಿಗಳು ಕಿರುಚಾಟ ಮುಂದುವರಿಸಿದ್ದರು. ಈ ಕುರಿತು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.