ಮಂಗಳೂರು : ರೌಡಿ ಶೀಟರ್ ಟ್ಯಾಬ್ಲೆಟ್ ಆರಿಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಷದ್, ಪುಚ್ಚೆ ನಿಸಾಕ್ ಮತ್ತು ಜುನೈದ್ ಬಂಧಿತರು. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಮಾರ್ಚ್ 27ರಂದು ತೊಕ್ಕೊಟ್ಟಿನಲ್ಲಿ ಆರಿಫ್ನನ್ನು ಕಾರು ಡಿಕ್ಕಿ ಹೊಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆದರೆ ಇದಕ್ಕೂ ಮುನ್ನ ಫೆಬ್ರವರಿ 13ರಂದು ಆರಿಫ್ ಮಂಗಳೂರಿಗೆ ತೆರಳುತ್ತಿದ್ದಾಗ ಇದೇ ತಂಡ ಕೊಲೆಗೆ ಯತ್ನಿಸಿ ವಿಫಲವಾಗಿತ್ತು. ಈಗ ಬಂಧಿತರಾಗಿರುವ ಆರೋಪಿಗಳು ಈ ಹಿಂದಿನ ಕೊಲೆ ಯತ್ನ ಹಾಗೂ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಅರ್ಷದ್ ಹಂತಕರಿಗೆ ಶಸ್ತ್ರಾಸ್ತ್ರ, ಹಣ ಹಾಗೂ ಪೊಲೀಸರ ಸಂಚಾರದ ಬಗ್ಗೆ ಮಾಹಿತಿಯನ್ನು ಒದಗಿಸುತ್ತಿದ್ದ. ಪುಚ್ಚೆ ನಿಸಾಕ್ ಈ ಹಿಂದೆ ನಡೆದ ಕೊಲೆ ಯತ್ನ ಹಾಗೂ 2022ರ ದಾಳಿಯಲ್ಲೂ ಭಾಗಿಯಾಗಿದ್ದ ಹಳೆ ಆರೋಪಿಯಾಗಿದ್ದಾನೆ. ಜುನೈದ್ ಎಂಬಾತ ಕೃತ್ಯಕ್ಕೆ ವಾಹನ ವ್ಯವಸ್ಥೆ ಮಾಡಿದ್ದನು. “ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು,” ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.





