ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪ ಬುಧವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಯುವಕ ಆತ್ಮಹತ್ಯೆಗೈದಿರೋದಾಗಿ
ಶಂಕಿಸಲಾಗಿದೆ.
ಮೃತಪಟ್ಟ ಯುವಕ ಉಳ್ಳಾಲ ತಾಲೂಕಿನ ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಕೆಂಪು ಮಣ್ಣು ನಿವಾಸಿ ತೇಜಸ್ (24) ಎಂದು ತಿಳಿಯಲಾಗಿದೆ.
ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಉದ್ಯೋಗಿ ಮೋಹನ್ ದಾಸ್ ಎಸ್. ಅಮೀನ್ ಅವರ ಪುತ್ರ ತೇಜಸ್ ಮಣಿಪಾಲದ ವಿದ್ಯಾಸಂಸ್ಥೆಯೊಂದರಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದ. ಬುಧವಾರ ರಾತ್ರಿ ಮನೆಯ ಬೆಡ್ ರೂಮ್ ಸೇರಿದ್ದು, ಗುರುವಾರ ಬೆಳಗ್ಗೆ ಮೊಬೈಲ್ ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದ.
ಎಷ್ಟೇ ಹುಡುಕಿದರೂ ತೇಜಸ್ ಸುಳಿವು ಲಭಿಸದ ಕಾರಣ ತಂದೆ ಮೋಹನ್ ದಾಸ್ ಅವರು ನಿನ್ನೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿಯಲ್ಲಿ ನಿನ್ನೆ ಬೆಳಗ್ಗೆಯೇ ಅಪರಿಚಿತ ಯುವಕನೋರ್ವನ ಮೃತದೇಹ ದೊರೆತ್ತಿದ್ದು ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ರೈಲ್ವೇ ಹಳಿಯಲ್ಲಿ ನಿನ್ನೆ ಪತ್ತೆಯಾದ ಮೃತದೇಹವು ತೇಜಸ್ ನದೆಂದು ಪೋಷಕರು ಗುರುತು ಪತ್ತೆ ಹಚ್ಚಿದ್ದಾರೆ.