ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಗೋಳಿಕಟ್ಟೆ ಪ್ರದೇಶದಲ್ಲಿ ಕಾರು ಹಾಗೂ ಟಿಪ್ಪರ್ ಚಾಲಕರ ನಡುವೆ ನಡೆದ ರಸ್ತೆ ಜಗಳಕ್ಕೆ ಸಂಬಂಧಿಸಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮೊದಲ ದೂರು
ಸುಧೀರ್ ಶೆಟ್ಟಿ (46) ಅವರು ಫೆಬ್ರವರಿ 17, 2026ರಂದು ರಾತ್ರಿ ಸುಮಾರು 9:45 ಗಂಟೆಗೆ ನಂದಳಿಕೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಟಿಪ್ಪರ್ ವಾಹನಗಳೊಂದಿಗೆ ಸೈಡ್ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಕೆಲವರು ಸ್ಥಳಕ್ಕೆ ಬಂದು ತಮಗೆ ಹಾಗೂ ತಡೆಯಲು ಬಂದ ಮತ್ತೊಬ್ಬರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಸುಧೀರ್ ಶೆಟ್ಟಿ ಅವರು ಉಡುಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಅಪರಾಧ ಕ್ರಮಾಂಕ 17/2026 ದಾಖಲಿಸಲಾಗಿದೆ.
ಪ್ರತಿದೂರು
ಇನ್ನೊಂದು ಪ್ರಕರಣದಲ್ಲಿ ರಾಹುಲ್ ಟೆರೆನ್ಸ ಐಜು (28) ಅವರು ಟಿಪ್ಪರ್ನಲ್ಲಿ ಜಲ್ಲಿ ಸಾಗಿಸುತ್ತಿದ್ದ ವೇಳೆ ಸುಧೀರ್ ಶೆಟ್ಟಿ ಮತ್ತು ರಿತೇಶ್ ಶೆಟ್ಟಿ ತಮ್ಮ ಕಾರಿನಲ್ಲಿ ಬಂದು ಸೈಡ್ ನೀಡದ ವಿಚಾರವಾಗಿ ಜಗಳವಾಡಿ, ತಮ್ಮನ್ನು ಹಾಗೂ ಇನ್ನಿಬ್ಬರನ್ನು ಕೆಳಗೆ ಎಳೆದು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಗಾಯಗೊಂಡವರು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಅಪರಾಧ ಕ್ರಮಾಂಕ 18/2026 ದಾಖಲಿಸಲಾಗಿದೆ.ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



