ಉಡುಪಿ: ಜಿಲ್ಲೆಯಾದ್ಯಂತ ಸೋಮವಾರ ನಾಗರಪಂಚಮಿ ಹಬ್ಬವನ್ನು ವಿವಿಧ ದೇವಸ್ಥಾನಗಳಲ್ಲಿ, ನಾಗ ಸಾನ್ನಿಧಿಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಠದ ನಾಗಬನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಮುಚ್ಚಲಕೋಡು, ಮಾಂಗೋಡು, ತಾಂಗೋಡು, ಅರಿತೋಡು ಸುಬ್ರಹ್ಮಣ್ಯ ದೇವಸ್ಥಾನ, ಕರಂಬಳ್ಳಿಯ ವೆಂಕಟರಮಣ ದೇವಸ್ಥಾನ, ಶ್ರೀವೆಂಕಟರಮಣ ದೇವಸ್ಥಾನ, ಗುಂಡಿಬೈಲು ಸುಬ್ರಹ್ಮಣ್ಯ ದೇವಸ್ಥಾನ, ಕಿನ್ನಿಮೂಲ್ಕಿಯ ಕನ್ನರ್ಪಾಡಿ ದೇವಸ್ಥಾನದ ಬಳಿಯ ನಾಗಸನ್ನಿಧಿ, ಮಠದಬೆಟ್ಟುವಿನ ಸಪರಿವಾರಕ ಶ್ರೀ ನಾಗಬ್ರಹ್ಮಸ್ಥಾನ, ಸಗ್ರಿ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಮೊದಲಾದ ಕಡೆಗಳಲ್ಲಿ ಭಕ್ತರು ತನು (ಹಾಲು, ಎಳನೀರು, ಜೇನುತುಪ್ಪ) ಸಮರ್ಪಣೆ ಮಾಡಿ ನಾಗದೇವರಿಗೆ ಪೂಜೆ ಸಲ್ಲಿಸಿದರು.
ಸೋಮವಾರ ಜಿಲ್ಲೆಯಾದ್ಯಂತ ಆಗಾಗ್ಗೆ ವರುಣನ ಪುಷ್ಪವೃಷ್ಟಿಯಂತೆ ಮಳೆ ಸುರಿಯುತ್ತಿದ್ದ ಕಾರಣ ನಾಗರಪಂಚಮಿಗೆ ದೂರದ ಊರಿನಿಂದ ಮೂಲಸ್ಥಾನಗಳಿಗೆ ತೆರಳುವ ಭಕ್ತರಿಗೆ ಅನುಕೂಲವಾಯಿತು.
ಅಂಗಡಿಗಳಲ್ಲಿ ದೇವರಿಗೆ ಹೂ, ಹಣ್ಣು ಖರೀದಿ ಭರಾಟೆ ಜೋರಾಗಿತ್ತು. ಹೊರ ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಿಗಳು ನಗರದ ವಿವಿಧೆಡೆ ಟೆಂಟ್ ಹಾಕಿ ಕೇದಗೆ, ಸಿಂಗಾರ ಹೂವು, ಸೀ-ಯಾಳ, ಕೆಂದಾಳೆ ಮಾರಾಟದಲ್ಲಿ ತೊಡಗಿದ್ದರು.





