Home Crime ಸೈಡ್ ಕೊಡದ ವಿಚಾರಕ್ಕೆ ರಿಕ್ಷಾ ಚಾಲಕನ ಮೇಲೆ ಹಲ್ಲೆ : ನಾಲ್ವರ ವಿರುದ್ಧ ಪ್ರಕರಣ ದಾಖಲು…!!

ಸೈಡ್ ಕೊಡದ ವಿಚಾರಕ್ಕೆ ರಿಕ್ಷಾ ಚಾಲಕನ ಮೇಲೆ ಹಲ್ಲೆ : ನಾಲ್ವರ ವಿರುದ್ಧ ಪ್ರಕರಣ ದಾಖಲು…!!

ಗಂಗೊಳ್ಳಿ: ಕಾರಿಗೆ ಸೈಡ್ ಕೊಡದ ವಿಚಾರಕ್ಕೆ ರಿಕ್ಷಾ ಚಾಲಕನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ತ್ರಾಸಿ ಗ್ರಾಮದ ಮೆಕ್ಕಿ ಎಂಬಲ್ಲಿ ನಡೆದಿದೆ.

ಆಗಸ್ಟ್ 12ರಂದು ಸಂಜೆ 6:30ರ ಸುಮಾರಿಗೆ ಅಂಬಿಕಾ ಪೂಜಾರಿ ಅವರು ತಮ್ಮ ಪತಿಯ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, KA-19-MS-7888 ನೋಂದಣಿ ಸಂಖ್ಯೆಯ ಕಾರನ್ನು ರಿಕ್ಷಾಕ್ಕೆ ಅಡ್ಡ ಇಡಲಾಗಿದೆ. ಬಳಿಕ ಕಾರಿನಲ್ಲಿದ್ದ ಸುದರ್ಶನ ಶೆಟ್ಟಿ, ರಾಹುಲ್ ಪೂಜಾರಿ, ಶ್ರೀನಿವಾಸ ಹಾಗೂ ಸುರೇಶ್ ಪೂಜಾರಿ ಎಂಬವರು ರಿಕ್ಷಾದಿಂದ ಪಿರ್ಯಾದಿದಾರರ ಪತಿಯನ್ನು ಕೆಳಕ್ಕೆ ಬೀಳಿಸಿ ಕಾಲಿನಿಂದ ತುಳಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಕೋಲಿನಿಂದ ತಲೆಗೆ ಹೊಡೆದು, ಕೈಯಿಂದ ಎದೆಗೆ ಹೊಡೆದು ಕಾಲಿನಿಂದ ತುಳಿದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಗಲಾಟೆಯನ್ನು ಬಿಡಿಸಲು ಮುಂದಾದ ಅಂಬಿಕಾ ಪೂಜಾರಿ ಹಾಗೂ ರೇಷ್ಮಾ ಎಂಬವರನ್ನು ಆರೋಪಿಗಳು ದೂಡಿ ಹಾಕಿದ್ದಾರೆ ಎನ್ನಲಾಗಿದೆ. ಇದೇ ವೇಳೆ KA-20-MG-7468 ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಪಿರ್ಯಾದಿದಾರರ ಪತಿಗೆ ಜೀವ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಿಕ್ಷಾ ಚಾಲಕ ಕಾರಿಗೆ ಸೈಡ್ ನೀಡದಿದ್ದೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.