ಕುಂದಾಪುರ: ‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ ಇಂದು (ಮೇ 9) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಜೊತೆ ಹಸೆಮಣೆ ಏರಿದ್ದಾರೆ.
ಚೈತ್ರಾ ಮತ್ತು ಶ್ರೀಕಾಂತ್ 12 ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಸಮ್ಮತಿಯೊಂದಿಗೆ ಪ್ರೀತಿಸಿದ ಹುಡುಗನೊಂದಿಗೆ ಸರಳ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಕ್ಕೆ ಆಪ್ತರಾದ 100 ಜನರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿತ್ತು. ವೈದಿಕ ಶಾಸ್ತ್ರದಂತೆ ಮದುವೆ ಕಾರ್ಯಕ್ರಮ ನಡೆದಿದೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ , ಗೋಲ್ಡ್ ಸುರೇಶ್ ಭಾಗಿಯಾಗಿ ನವದಂಪತಿಗೆ ಶುಭಹಾರೈಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಲೇಜಿನಲ್ಲಿ ಓದುತ್ತಿದ್ದಾಗ ಚೈತ್ರಾಗೆ ಶ್ರೀಕಾಂತ್ ಕಶ್ಯಪ್ ಪರಿಚಯವಾಗಿತ್ತು. ಜಗಳದಿಂದ ಶುರುವಾದ ಸ್ನೇಹ ಈಗ ಮದುವೆಗೆ ಮುನ್ನುಡಿ ಬರೆದಿದೆ. ಆ್ಯನಿಮೇಷನ್ ಕೋರ್ಸ್ ಮಾಡಿರುವ ಶ್ರೀಕಾಂತ್ ಕಶ್ಯಪ್ ಸುದ್ದಿವಾಹಿನಿವೊಂದರಲ್ಲಿ ಚೈತ್ರಾ ಜೊತೆ ಕೆಲಸ ಮಾಡಿದ್ದರು. ಇದೀಗ ಜ್ಯೋತಿಷ್ಯ, ವಾಸ್ತು, ಪೌರೋಹಿತ್ಯದ ಕೆಲಸದಲ್ಲಿ ಶ್ರೀಕಾಂತ್ ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ‘ಮಜಾ ಟಾಕೀಸ್’ ಶೋಗೆ ಬಿಗ್ ಬಾಸ್ ಸ್ಪರ್ಧಿಗಳಾದ ಧರ್ಮ ಕೀರ್ತಿರಾಜ್, ಅನುಷಾ ರೈ ಹಾಗೂ ಚೈತ್ರಾ ಎಂಟ್ರಿ ಕೊಟ್ಟಿದ್ದರು. ಚೈತ್ರಾ ಕುಂದಾಪುರ ಅವರಿಗೆ ಮದುವೆ ಫಿಕ್ಸ್ ಅಗಿದೆ ಎನ್ನುತ್ತಲೇ ಸೃಜನ್ ಲೋಕೇಶ್ ಮಾತು ಶುರು ಮಾಡಿದ್ದರು. ಚೈತ್ರಾಗೆ ಸೃಜನ್ ಲವ್ ಅಥವಾ ಅರೇಂಜ್ಡ್ ಮ್ಯಾರೇಜಾ ಎಂಬ ಪ್ರಶ್ನಿಸಿದ್ದರು. ಇದಕ್ಕೆ ಎರಡು ಎಂದು ಚೈತ್ರಾ ಉತ್ತರ ನೀಡಿದ್ದರು. ಈ ಮಧ್ಯೆ ಅವರದ್ದು 12 ವರ್ಷದ ಲವ್ ಸ್ಟೋರಿ ಎಂಬ ಅನುಷಾ ರೈ ಮಾತಿಗೆ, ಚೈತ್ರಾ ಯೆಸ್ ಕಾಲೇಜಿನಲ್ಲಿ ಲವ್ ಶುರುವಾಗಿದ್ದು ಅನ್ನೋ ವಿಚಾರವನ್ನು ರಿವೀಲ್ ಮಾಡಿದ್ದರು. ಈಗ ಚೈತ್ರಾ ಕುಂದಾಪುರ ಮದುವೆ ಆಗಿದ್ದಾರೆ.
