Home Latest ಮುಖ್ಯ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆತ : ಉಡುಪಿ ವಕೀಲರ ಸಂಘದಿಂದ ಖಂಡನೆ…!!

ಮುಖ್ಯ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆತ : ಉಡುಪಿ ವಕೀಲರ ಸಂಘದಿಂದ ಖಂಡನೆ…!!

ಉಡುಪಿ : ಇಂದು ಉಡುಪಿ ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ತುರ್ತು ಸಭೆ ನಡೆದು, ಅಕ್ಟೋಬರ್ ತಾ. 6ರಂದು ನ್ಯಾಯಾಲಯದ ಕಲಾಪ ನಡೆಯುವ ಸಂದರ್ಭದಲ್ಲಿ ವಕೀಲನೊಬ್ಬನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ಬಿ.ಆರ್. ಗವಾಯಿ ಇವರ ಮೇಲೆ ಪಾದರಕ್ಷೆ ಎಸೆದು ನ್ಯಾಯಾಂಗದ ಘನತೆಗೆ ಧಕ್ಕೆ ಎಸಗಿದ ಘಟನೆಯನ್ನು ಸರ್ವಾನುಮತದಿಂದ ಖಂಡಿಸಲಾಯಿತು. ಮತ್ತು ಈ ದುಷ್ಕೃತ್ಯವನ್ನು ಎಸಗಿದ ಆರೋಪಿಯನ್ನು ಉಗ್ರ ಶಿಕ್ಷೆಗೆ ಒಳಪಡಿಸಿ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಲಾಯಿತು.

ಈ ಘಟನೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಡೆದ ಧಾಳಿಯಾಗಿದೆ. ಸಂವಿಧಾನ ಓದಿದ, ಪ್ರಜಾಸತ್ತೆಯನ್ನು ಎತ್ತಿ ಹಿಡಿಯಬೇಕಾದ ಹಿರಿಯ ವಕೀಲರೊಬ್ಬರು ನ್ಯಾಯಪೀಠದ ಕಡೆಗೆ ಚಪ್ಪಲಿ ಎಸೆಯುತ್ತಾರೆ ಮಾತ್ರವಲ್ಲ ಅದನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದಾದರೆ ಆತನದು ಎಂತಹ ಕ್ರಿಮಿನಲ್ ಮನಸ್ಥಿತಿ ಇರಬೇಕು..? ಅರಿವಿದ್ದೂ ಎಸಗಿದ ಈ ಕೃತ್ಯಕ್ಕೆ ಕಠಿಣ ‌ಶಿಕ್ಷೆ ಆಗಲೇ ಬೇಕು.
ನ್ಯಾಯಪೀಠದ ಮೇಲೆ ‌ಎಸಗಿರುವ ಈ ಕೃತ್ಯವನ್ನು ಸಂವಿಧಾನದ ಮೇಲೆ ಗೌರವವಿರುವ ಪ್ರತಿಯೊಬ್ಬ ನಾಗರಿಕನೂ ಖಂಡಿಸಬೇಕಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಸಭೆಯಲ್ಲಿ ಭಾಗವಹಿಸಿದ ಉಪಾಧ್ಯಕ್ಷ ಶ್ರೀ ಮಿತ್ರ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಎ. ಆರ್., ಖಜಾಂಚಿ ಶ್ರೀ ಗಂಗಾಧರ ಎಚ್.ಎಂ., ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಸಂತೋಷ್ ಮೂಡುಬೆಳ್ಳೆ ಸಹಿತ ಕಾರ್ಯಕಾರಿ ಸಮಿತಿಯ ಸಕಲ ಸದಸ್ಯರು ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಘಟನೆಯ ಬಗ್ಗೆ ಉನ್ನತ ಮಟ್ಟದ ನಡೆಸಬೇಕೆಂದು ಮತ್ತು ಇಂತಹ ದುರ್ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.