Home Crime ಸಾಸ್ತಾನ ಜಂಕ್ಷನ್‌ನಲ್ಲಿ ಭೀಕರ ಅಪಘಾತ : ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಕಾರು ಢಿಕ್ಕಿ :...

ಸಾಸ್ತಾನ ಜಂಕ್ಷನ್‌ನಲ್ಲಿ ಭೀಕರ ಅಪಘಾತ : ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಕಾರು ಢಿಕ್ಕಿ : ಸಾವು…!!

ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಜಂಕ್ಷನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಮೋಗವೀರ ಪೇಟೆ ನಿವಾಸಿ ದಿನೇಶ ಮರಕಾಲ (42) ನೀಡಿದ ದೂರಿನ ಪ್ರಕಾರ, ಜೂನ್ 1ರಂದು ರಾತ್ರಿ 12.41ರ ಸುಮಾರಿಗೆ ಅವರು ಕೆಲಸದ ನಿಮಿತ್ತ ಕೋಡಿ ಹೊಸಬೆಂಗ್ರೆ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಗಣೇಶ್ ಕರ್ಕೇರ ಅವರು ಸಾಸ್ತಾನ ಜಂಕ್ಷನ್‌ನಲ್ಲಿ ಉಡುಪಿ-ಕುಂದಾಪುರ ರಸ್ತೆಯನ್ನು ದಾಟಿ ಪಶ್ಚಿಮ ಬದಿಯ ಡಿವೈಡರ್ ಸಮೀಪದ ಅಂಚಿನಲ್ಲಿ ನಿಂತುಕೊಂಡಿದ್ದ ವೇಳೆ, ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ KA-20-MA-3419 ಸಂಖ್ಯೆಯ ಕಾರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಡಿಕ್ಕಿಯ ತೀವ್ರತೆಗೆ ಗಣೇಶ್ ಕರ್ಕೇರ ಅವರು ಸುಮಾರು ಐದು ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಲ್ಪಟ್ಟಿದ್ದು, ಗಂಭೀರ ರಕ್ತಗಾಯ ಹಾಗೂ ಒಳಜಖಂ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಕಾರು ಚಾಲಕ ಸನೀಶ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.