Home Crime ಮಂಗಳೂರು : ಮನೆಗೆ ನುಗ್ಗಿ ಕಳವು ಪ್ರಕರಣ: ನೇಪಾಳ ಮೂಲದ ಮೂವರು ಆರೋಪಿಗಳು ಅರೆಸ್ಟ್..!!

ಮಂಗಳೂರು : ಮನೆಗೆ ನುಗ್ಗಿ ಕಳವು ಪ್ರಕರಣ: ನೇಪಾಳ ಮೂಲದ ಮೂವರು ಆರೋಪಿಗಳು ಅರೆಸ್ಟ್..!!

ಮಂಗಳೂರು : ನಗರದ ಉರ್ವ ಮಾರ್ಕೆಟ್ ಸಮೀಪದ ಮಠದಕಣಿಯ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಮೂವರು ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನೇಪಾಳದ ತಿಲಕ್ ಕುಮಾರ್ ಖಡ್ಕ ಯಾನೆ ತಿಲಕ್ ಖಡ್ಕ (36) ಮತ್ತು ಅಶೋಕ್ ರಾಜ್ ಯಾನೆ ಅಶೋಕ್ ಸಿಂಗ್ ಯಾನೆ ಅಶೋಕ್ ಸಿಂಗ್ ಠಾಕುರಿ (33) ಹಾಗೂ ದಿಪೆಂದರ್ ರಸೈಲಿ (25) ಎಂದು ಗುರುತಿಸಲಾಗಿದೆ.

ಜು.11ರಂದು ಸಂಜೆ 5:30ಕ್ಕೆ ಮನೆಮಂದಿ ಮನೆಗೆ ಲಾಕ್ ಮಾಡಿಕೊಂಡು ಬಂಟ್ವಾಳ ತಾಲೂಕಿನ ವಿಟ್ಲ ಕಡಂಬು ಎಂಬಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮರುದಿನ ಮನೆಗೆ ಬಂದಾಗ ಹಿಂಬದಿಯ ಬಾಗಿಲು ಒಡೆದು ಸುಮಾರು 64 ಗ್ರಾಂ ತೂಕದ ಚಿನ್ನಾಭರಣ ಹಾಗೂ 25,000 ರೂ. ನಗದು ಸಹಿತ 8,57,000 ರೂ. ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯ ವೇಳೆ ಆರೋಪಿಗಳು ಬೋಳೂರಿನಲ್ಲಿರುವ ಬಗ್ಗೆ ಮಾಹಿತಿ ಬಂದಿದ್ದು, ಅದರಂತೆ ಶುಕ್ರವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿದ್ದಾರೆ. ಅದಲ್ಲದೆ ಆರೋಪಿಗಳು ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಕಳ್ಳತನ ಮಾಡಿದ 790 ಗ್ರಾಂ ಬೆಳ್ಳಿ ಆಭರಣಗಳ ಸಹಿತ 10 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಳೆದ ಮಾರ್ಚ್‌ನಲ್ಲಿ ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನಕ್ಕೆ ಈ ಆರೋಪಿಗಳು ಪ್ರಯತ್ನ ಪಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ರಾಜ್ಯದ ಬೆಂಗಳೂರು, ದಾವಣಗೆರೆ, ಉಡುಪಿ ಸಹಿತ ಹಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 15ಕ್ಕೂ ಹೆಚ್ಚು ಮನೆ ಕಳ್ಳತನ ಮಾಡಿದ ಬಗ್ಗೆ ಈ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ತಮಿಳುನಾಡು, ದೆಹಲಿ, ಹರ್ಯಾಣ ರಾಜ್ಯಗಳಲ್ಲಿ ಕೂಡ ಇವರ ಮೇಲೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.