Home Karavali Karnataka ಸೆ. 29 ರಿಂದ ಉಡುಪಿ ಶಾರದೆಯ ಅಷ್ಟಮ ವರ್ಷದ ಮಹೋತ್ಸವ…!!

ಸೆ. 29 ರಿಂದ ಉಡುಪಿ ಶಾರದೆಯ ಅಷ್ಟಮ ವರ್ಷದ ಮಹೋತ್ಸವ…!!

ಉಡುಪಿ : ಶ್ರೀ ಶಾರದಾ ಜನಸೇವಾ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ಪ್ರವರ್ತಿತ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ (ರಿ.) ಉಡುಪಿ ಜಿಲ್ಲೆಯ ಅಷ್ಟಮ ವರ್ಷದ ಶಾರದಾ ಮಹೋತ್ಸವ ಸೆ. 29 ರ ಸೋಮವಾರದಿಂದ ಗುರುವಾರದವರೆಗೆ ಕಿನ್ನಿಮುಲ್ಕಿ ರಾ-ಹೆ 66ರ ಸ್ವಾಗತ ಗೋಪುರ ಬಳಿಯ ಮೈದಾನದಲ್ಲಿ ವಿಜೃಂಭಣೆಯಿಂದ ಆರಂಭವಾಗಲಿದೆ.

ಸೋಮವಾರ ಬೆಳಿಗ್ಗೆಯಿಂದ ಶ್ರೀ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ, ಗಣ ಹೋಮ ಚಂಡಿಕಾಯಾಗ, ಮಹಾ ಅನ್ನಸಂತರ್ಪಣೆ, ವಿದ್ವಾನ್ ಹೆರ್ಗ ಹರಿದಾಸ್ ಭಟ್ ರವರಿಂದ ಪ್ರವಚನ, ಸಾಯಂಕಾಲ ದೀಪಾರಾಧನೆ ಸಹಿತ ರಂಗ ಪೂಜೆ ನಡೆಯಲಿದೆ.

ಸೋಮವಾರ ಸಾಯಂಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಭೀಮಸೇತು ಮುನಿವೃಂದ ಮಠದ ಶ್ರೀ ಶ್ರೀ ರಘುಮಾನ್ಯ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ ಮತ್ತು ಸಂಸದರಾದ ಕೋಟಿ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ ಪಾಲ್ ಸುವರ್ಣ, ಉದ್ಯಮಿಗಳು ಮತ್ತು ಸಂಘ ಸಂಸ್ಥೆಗಳ ಪ್ರಮುಖರಾದ ಎಸ್ ಆರ್ ಉದಯ್ ಕುಮಾರ್ ಶೇಟ್, ಸಾಧು ಸಾಲಿಯಾನ್ ಮಲ್ಪೆ, ಮೋಹನ್ ಮುದ್ದಣ್ಣ ಶೆಟ್ಟಿ, ಪ್ರಭಾಶಂಕರ್ ಪದ್ಮಶಾಲಿ, ರಾಘವೇಂದ್ರ ಭಟ್, ದೀಪಕ್ ಪುತ್ರನ್ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಮಂಗಳವಾರ ಸಾಯಂಕಾಲ 5.00 ರಿಂದ ದುರ್ಗಾ ನಮಸ್ಕಾರ ಪೂಜೆ, ಬುಧವಾರ ವಿದ್ಯಾರ್ಜನೆ, ಪುಷ್ಪಾರ್ಚನೆ ಸೇವಾ ಪೂಜೆಗಳು ನಡೆಯಲಿವೆ.

ಪ್ರತಿದಿನ ಬೆಳಿಗ್ಗೆ ವಿವಿಧ ಭಜನಾ ಮಂಡಳಿಗಳಿಂದ ನಾಮ ಸಂಕೀರ್ತನೆ ಮತ್ತು ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಗುರುವಾರ ಸಾಯಂಕಾಲ 4.00 ಗಂಟೆಯಿಂದ ಶ್ರೀ ಶಾರದಾ ವಿಗ್ರಹದ ವಿಸರ್ಜನಾ ಭವ್ಯ ಶೋಭೆಯಾತ್ರೆಯು ಕಿನ್ನಿಮುಲ್ಕಿ ಮೈದಾನದಿಂದ ಹೊರಟು ಫಯರ್ ಸ್ಟೇಷನ್ ರಸ್ತೆ, ವಿವೇಕಾನಂದ ರಸ್ತೆ, ಗೋವಿಂದ ಕಲ್ಯಾಣ ಮಂಟಪ ಮಾರ್ಗವಾಗಿ ಜೋಡುಕಟ್ಟೆಯಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಸ್ವಾಗತ ಗೋಪುರದ ಮೂಲಕ ಕನ್ನರ್ಪಾಡಿ-ಕಡೆಕಾರ್ ಮಾರ್ಗವಾಗಿ ಸಾಗಿ ಕಡೆಕಾರಿನ ದೇವರ ಕೆರೆಯಲ್ಲಿ ಜಲ ಸ್ತಂಭನಗೊಳ್ಳಲಿದೆ.

ಜಿಲ್ಲೆಯ ಸಮಸ್ತ ಜನರು ದಿನಂಪ್ರತಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಶಾರದಾ ಮಾತೆಯ ಕೃಪಾ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಮಗ್ತಿಯ ಅಧ್ಯಕ್ಷರಾದ ನಾಗಭೂಷಣ್ ಶೇಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.