
ಶಂಕರನಾರಾಯಣ: ಬಸ್ಸಿಗೆ ಕಾಯುತ್ತಾ ಸಿಮೆಂಟ್ ಬೆಂಚ್ ಮೇಲೆ ಕುಳಿತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಶಂಕರನಾರಾಯಣದಲ್ಲಿ ನಡೆದಿದೆ.
ಮೃತರನ್ನು ತಾರೇಮರನ ಜೆಡ್ಡು ನಿವಾಸಿ ಮಂಜುಳಾ ಪೂಜಾರ್ತಿ (50) ಎಂದು ಗುರುತಿಸಲಾಗಿದೆ. ಇವರು ಮೇ 23ರಂದು ಉಳ್ಳೂರಿನ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ, ದೈವದ ಮನೆಯ ಪೂಜೆಯ ಪ್ರಯುಕ್ತ ತಮ್ಮ ಪಾಲಿನ ಹಣವನ್ನು ಕೊಡಲು ತಮ್ಮ ಅಣ್ಣ ರಘುರಾಮ ಪೂಜಾರಿ ಅವರ ಮನೆಗೆ ಬಂದಿದ್ದರು.
ಹಣ ನೀಡಿ ಮಾತನಾಡಿಕೊಂಡ ಬಳಿಕ ಮನೆಗೆ ತೆರಳಲು ಬಸ್ಗಾಗಿ ಕಾಯುತ್ತಾ ರಸ್ತೆ ಬದಿಯ ಸಿಮೆಂಟ್ ಬೆಂಚ್ ಮೇಲೆ ಕುಳಿತಿದ್ದ ವೇಳೆ ಸಂಜೆ ಸುಮಾರು 4 ಗಂಟೆಗೆ ಅಂಪಾರು ಕಡೆಯಿಂದ ಶಂಕರನಾರಾಯಣ ಕಡೆಗೆ ಬರುತ್ತಿದ್ದ KA-20-ME-4694 ಸಂಖ್ಯೆಯ ಕಾರು ನಿಯಂತ್ರಣ ತಪ್ಪಿ ರಸ್ತೆ ಬಲಭಾಗಕ್ಕೆ ತಿರುಗಿ ಮಂಜುಳಾ ಪೂಜಾರ್ತಿ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ಮಂಜುಳಾ ಅವರ ಎಡಕಾಲು ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿದ್ದವರು ಅವರನ್ನು ತಕ್ಷಣ ಅಂಬ್ಯುಲೆನ್ಸ್ ಮೂಲಕ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಪಘಾತ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



