ಉಡುಪಿ : ನಗರದ ಸಿಟಿ ಬಸ್ಸು ನಿಲ್ದಾಣದ ಸನಿಹದಲ್ಲಿರುವ, ಕರ್ನಾಟಕ ಬ್ಯಾಂಕ್ ಬಳಿ, ದಿಕ್ಕುಕಾಣದೆ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿ, ಸಂಬಂಧಿಕರ ಪತ್ತೆಗೊಳಿಸಿ ಒಪ್ಪಿಸಲಾಗಿದೆ.
ರಕ್ಷಿಸಲ್ಪಟ್ಟ ವೃದ್ಧೆ ಸುಂದರಿ ಶೆಟ್ಟಿ (85ವ) ಎಂದು ಗುರುತಿಸಲಾಗಿದೆ. ವೃದ್ಧೆಯು ಅಸಹಾಯಕ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಬ್ಯಾಂಕಿನ ಸಿಬ್ಬಂದಿಯೊಬ್ಬರು, ನಾಗರೀಕ ಸಮಿತಿಯ ಕಛೇರಿಗೆ ಬಂದು, ಸಂಚಾಲಕ ನಿತ್ಯಾನಂದ ಒಳಕಾಡು ಅವರಿಗೆ ತಿಳಿಸಿದ್ದರು. ಕೂಡಲೇ ಸ್ಪಂದಿಸಿದ ಒಳಕಾಡುವರು ಘಟನಾ ಸ್ಥಳಕ್ಕೆ ಬಂದು, ನಗರ ಪೋಲಿಸ್ ಠಾಣೆಗೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದರು.
ಬಳಿಕ ವೃದ್ಧೆಯನ್ನು ಹಿರಿಯ ನಾಗರಿಕ ಸಹಾಯವಾಣಿಯ ಕಛೇರಿಗೆ ಅಂಬುಲೆನ್ಸ್ ವಾಹನದಲ್ಲಿ ಒಳಕಾಡುವರು ಕೊಂಡೊಯ್ದರು. ವಿಳಾಸ ಪತ್ತೆಗೊಳಿಸಿ, ವೃದ್ಧೆಯನ್ನು ಸಂಬಂಧಿ ಅನಿತಾ ಶೆಟ್ಟಿಗೆ ಒಪ್ಪಿಸಲಾಯಿತು.
ಕಾರ್ಯಚರಣೆಯಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕ ರೋಶನ್, ಆರಕ್ಷಕಿಯರಾದ ನಾಗರತ್ನ, ಶುಭ ಭಾಗಿಯಾಗಿದ್ದರು.