ಉಡುಪಿ : ಸಹಕಾರ ಸಂಘಗಳು ಹೆಚ್ಚಿನ ಪತ್ರ ವ್ಯವಹಾರವಿಲ್ಲದೇ, ಸರಳ ರೀತಿಯಲ್ಲಿ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲ ಸೌಲಭ್ಯವನ್ನು ನೀಡುತ್ತವೆ. ಇದರಿಂದಾಗಿ ಜನರು ಸಹಕಾರ ಸಂಘಗಳಲ್ಲಿ ವ್ಯವಹಾರ ನಡೆಸಲು ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಜನರಲ್ಲಿ ಆರ್ಥಿಕ ಉಳಿತಾಯ ಮನೋಭಾವ ಬೆಳೆಸುವಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಮಹತ್ತರದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ ತಿಳಿಸಿದರು.
ನಗರದ ಶೋಕಮಾತಾ ದೇವಾಲಯದ ಆವರಣದಲ್ಲಿರುವ ಆವೇ ಮರಿಯಾ ಸಭಾಂಗಣದಲ್ಲಿ ನಡೆದ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 28ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದರು.
ಸಹಕಾರ ಸಂಘಗಳು ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡಿದಂತೆ, ಸಾಲ ಪಡೆದ ಸದಸ್ಯರುಗಳು ಸಮಯಕ್ಕೆ ಸರಿಯಾಗಿ ಸಾಲಗಳನ್ನು ಮರುಪಾವತಿ ಮಾಡಿದ್ದಲ್ಲಿ ಸಂಘವು ಅಭಿವೃದ್ಧಿಯ ಉತ್ತುಂಗಕ್ಕೇರುತ್ತದೆ. ಇಂದು ಸಹಕಾರ ಸಂಘಗಳು ರಾಷ್ಟೀಕೃತ ಬ್ಯಾಂಕ್ಗಳಿಗೆ ಸಮನಾಗಿ ಸೇವೆಯನ್ನು ನೀಡಿ, ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.
ಉಡುಪಿ ಶೋಕಮಾತಾ ದೇವಾಲಯದ ಸಹಾಯಕ ಧರ್ಮಗುರುಗಳಾದ ವಂದನೀಯ ಫಾ| ಲಿಯೋ ಪ್ರವೀಣ್ ಡಿ’ಸೋಜಾ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಲೂವಿಸ್ ಲೋಬೊ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಭೆಗೆ ಮಾಹಿತಿಯನ್ನು ನೀಡಿದರು. ಹಿಂದಿನ ಆರ್ಥಿಕ ವರ್ಷದಲ್ಲಿ ಸಂಘವು ರೂ. 250 ಕೋಟಿಗೂ ಮೀರಿ ವ್ಯವಹಾರವನ್ನು ಮಾಡಿ ರೂ. 94 ಲಕ್ಷ ಲಾಭಗಳಿಸಿದ್ದು, ಸಂಘದ ಸದಸ್ಯರುಗಳಿಗೆ 18% ಲಾಭಾಂಶವನ್ನು ಘೋಷಣೆ ಮಾಡಿದರು.
ಸಂಘದ ಪ್ರಧಾನ ವ್ಯವಸ್ಥಪಕರಾದ ಸಂದೀಪ್ ಫೆರ್ನಾಂಡಿಸ್ ರವರು ವಾರ್ಷಿಕ ವರದಿಯನ್ನು ವಾಚಿಸಿದರು. ಸಂಘದ ಸ್ಥಾಪಕ ಸಂಚಾಲಕರು, ಮಾಜಿ ಅಧ್ಯಕ್ಷರಾದ ದಿವಂಗತ ಲೂವಿಸ್ ಡಿ’ಅಲ್ಮೇಡಾ ರವರ 28 ವರ್ಷಗಳ ಸೇವೆಗಾಗಿ ನೀಡಿದ ಸನ್ಮಾನವನ್ನು ಅವರ ಪತ್ನಿ ವಯ್ಲೆಟ್ ಡಿ’ಅಲ್ಮೇಡಾ ರವರು ಸ್ವೀಕರಿಸಿದರು. ಸಂಘದ ವಿಶ್ರಾಂತ ನಿರ್ದೇಶಕರುಗಳಾದ ಫೆಲಿಕ್ಸ್ ಪಿಂಟೋ, ಫ್ರಾಂಕ್ಲಿನ್ ಮಿನೇಜಸ್, ಜೆಸಿಂತಾ ಡಿ’ಸೋಜ, ಕೇವಿನ್ ಆರ್. ಪಿರೇರಾ ಮತ್ತು ಗಿಲ್ಬರ್ಟ್ ಫೆರ್ನಾಂಡಿಸ್ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಸಿ.ಎ. ಪರಿಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ವಿಧ್ಯಾರ್ಥಿ ವೇತನ, 13 ಅನಾರೋಗ್ಯ ಮತ್ತು ಅಶಕ್ತರಿಗೆ ಮತ್ತು ಎರಡು ಸಂಸ್ಥೆಗಳಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು.
ಸಂಘದ ಉಪಾಧ್ಯಕ್ಷರಾದ ಜೇಮ್ಸ್ ಡಿ’ಸೋಜ ಸ್ವಾಗತಿಸಿ, ನಿರ್ದೇಶಕರಾದ ಆರ್. ಮಾಕ್ಸಿಂ ಡಿ’ಸೋಜ ವಂದಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಇಗ್ನೇಷಿಯಸ್ ಮೋನಿಸ್, ಪರ್ಸಿ ಜೆ. ಡಿ’ಸೋಜ, ಆರ್ಚಿಬಾಲ್ಡ್ ಎಸ್. ಡಿ’ಸೋಜ, ಡಾ| ನೇರಿ ಕರ್ನೇಲಿಯೋ, ಲಾಯ್ಸೆಟ್ ಜೆ. ಕರ್ನೇಲಿಯೋ, ರಿಚರ್ಡ್ ಡಾಯಸ್, ಡಾಲ್ಫಿ ವಿ. ಲೂವಿಸ್, ವಿಲಿಯಂ ಮಚಾದೋ, ಓನಿಲ್ ಜೆ. ಡಿ’ಸೋಜ, ಜೆನೆವೀವ್ ಎಂ. ಮಿನೇಜಸ್, ಫ್ರ್ಯಾಂಕ್ ಪೀಟರ್ ಕರ್ಡೋಜಾ, ಸಂಘದ ಸಿಬ್ಬಂದಿ ವರ್ಗ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.