Home Kundapura News ಬೈಂದೂರಿನಲ್ಲಿ ಅಂದರ್‌-ಬಹರ್‌ ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: ಐವರ ಬಂಧನ

ಬೈಂದೂರಿನಲ್ಲಿ ಅಂದರ್‌-ಬಹರ್‌ ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: ಐವರ ಬಂಧನ

ಬೈಂದೂರು: ಉಪ್ಪುಂದ ಗ್ರಾಮದ ಪೂರ್ಣಿಮಾ ಬಾರ್‌ ಮತ್ತು ರೆಸ್ಟೂರೆಂಟ್‌ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಂದರ್‌-ಬಹರ್‌ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬೈಂದೂರು ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ ಕುಮಾರ್‌ ಬಿ.ವೈ ಅವರು ಸಿಬ್ಬಂದಿಯೊಂದಿಗೆ ಮೇ 14ರಂದು ಮಧ್ಯಾಹ್ನ 2:15ರ ಸುಮಾರಿಗೆ ದಾಳಿ ನಡೆಸಿದರು.

ದಾಳಿಯ ವೇಳೆ ಇಸ್ಪೀಟ್‌ ಜುಗಾರಿ ಆಟದಲ್ಲಿ ತೊಡಗಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರು ಬಿಜೂರು ಗ್ರಾಮದ ವಿಶ್ವನಾಥ ದೇವಾಡಿಗ್‌ (35), ಉಪ್ಪುಂದ ಗ್ರಾಮದ ಅಣ್ಣಪ್ಪ ಖಾರ್ವಿ (56), ಸುಬ್ರಹ್ಮಣ್ಯ ಖಾರ್ವಿ, ಕೃಷ್ಣ ಖಾರ್ವಿ (38) ಹಾಗೂ ಮತ್ತೋರ್ವ ಸುಬ್ರಹ್ಮಣ್ಯ ಖಾರ್ವಿ (38) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಜುಗಾರಿ ಆಟಕ್ಕೆ ಬಳಸಲಾಗಿದ್ದ ₹2,650 ನಗದು, 52 ಇಸ್ಪೀಟ್‌ ಎಲೆಗಳು ಹಾಗೂ ಹರಿದ ಹಳದಿ ಬಣ್ಣದ ಸಿಮೆಂಟ್‌ ಚೀಲವನ್ನು ಪಂಚರ ಸಮಕ್ಷಮದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2026 ಅಡಿಯಲ್ಲಿ ಕಲಂ 87 ಕೆಪಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.