ಶಂಕರನಾರಾಯಣ, ಜೂ. 29: ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಆಜ್ರಿ ಗ್ರಾಮದ ಹೊಳಂದೂರಿನಲ್ಲಿ 47 ವರ್ಷದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೃತರನ್ನು ಸಂತೋಷ ಶೆಟ್ಟಿ (47) ಎಂದು ಗುರುತಿಸಲಾಗಿದೆ. ಅವರು ಕೃಷಿ ಕೆಲಸ ಮಾಡಿಕೊಂಡಿದ್ದು, ಸುಮಾರು 13 ವರ್ಷಗಳ ಹಿಂದೆ ಸುಜಾತಾ ಅವರೊಂದಿಗೆ ವಿವಾಹವಾಗಿದ್ದರು. ಮದುವೆಯ ಬಳಿಕ ದಂಪತಿ ನಡುವೆ ಆಗಾಗ್ಗೆ ಕುಟುಂಬ ಕಲಹಗಳು ನಡೆಯುತ್ತಿದ್ದು, 2025ರಲ್ಲಿ ಪತ್ನಿ ಸಂತೋಷ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.
ಈ ಪ್ರಕರಣದ ಬಳಿಕ ಸಂತೋಷ ಶೆಟ್ಟಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅತಿಯಾದ ಮದ್ಯಪಾನದ ಚಟ ಬೆಳೆಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ, ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪರಿಚಯದವರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ಜೂನ್ 28ರಂದು ರಾತ್ರಿ ಸುಮಾರು 11:30ಕ್ಕೆ ಸತೀಶ್ ಶೆಟ್ಟಿ ಅವರಿಗೆ ಕರೆ ಮಾಡಿದ್ದು, ಬಳಿಕ ಯಾವುದೇ ಕರೆ ಸ್ವೀಕರಿಸಿರಲಿಲ್ಲ. ನಂತರ ಜೂನ್ 29ರಂದು ಬೆಳಿಗ್ಗೆ 8:10ರೊಳಗೆ ಪತ್ನಿಯ ಮನೆಯಾದ ಆಜ್ರಿ ಗ್ರಾಮದ ಹೊಳಂದೂರಿನ ಹೆಬ್ಬಾಗಿಲು ಮನೆಯಲ್ಲಿ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 16/2026ರಡಿ ಬಿಎನ್ಎಸ್ಎಸ್ ಕಲಂ 194 ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.




