Home Karkala News ಮೂಡುಬಿದಿರೆಯಲ್ಲಿ ಹಲಸು ಮೇಳ

ಮೂಡುಬಿದಿರೆಯಲ್ಲಿ ಹಲಸು ಮೇಳ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪವರ್ ಫ್ರೆಂಡ್ಸ್ ಬೆದ್ರ, ವಂಶಿ ಇವೆಂಟ್ಸ್, ಬೆನಕ ಇವೆಂಟ್ಸ್ ಹಾಗೂ ಜೆಸಿಐ ಮೂಡುಬಿದಿರೆ ತ್ರಿಭುವನ್ ಸಂಯುಕ್ತ ಆಶ್ರಯದಲ್ಲಿ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಬೃಹತ್ ಹಲಸು ಮೇಳಕ್ಕೆ ಶುಕ್ರವಾರ ಸಾಯಂಕಾಲ ಚಾಲನೆ ನೀಡಲಾಯಿತು.

ಉದ್ಯಮಿ ಕೆ. ಶ್ರೀಪತಿ ಭಟ್ ಮೇಳ ಉದ್ಘಾಟಿಸಿ ಮಾತನಾಡಿ, ಹಿಂದೆ ಬಡವರ ಆಹಾರವೆನಿಸಿಕೊಂಡಿದ್ದ ಹಲಸು ಇಂದು ಹಲವಾರು ಪ್ರಯೋಗಗಳ ಮೂಲಕ ವಿವಿಧ ಖಾದ್ಯಗಳಾಗಿ ಮಾರ್ಪಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಮೇಳದಲ್ಲಿ ಕೇವಲ ಹಲಸು ಮಾತ್ರವಲ್ಲದೆ ಮಾವು, ಗೇರು ಹಾಗೂ ಗೃಹ ಉತ್ಪನ್ನಗಳ ಮೌಲ್ಯವರ್ಧನೆಯಾಗುತ್ತಿದೆ ಎಂದು ತಿಳಿಸಿದರು.

 

ವಂಶಿ ಇವೆಂಟ್ಸ್ ಮಾಲಕಿ ರಮಿತಾ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸುತ್ತಿರುವ ಈ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಹಲಸಿನ ವೈವಿಧ್ಯಮಯ ಖಾದ್ಯಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ನುರಿತ ಮಾರಾಟಗಾರರು ವಿಶೇಷ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಸುತ್ತಿದ್ದಾರೆ ಎಂದರು.

 

ಲಯನ್ಸ್ ಅಧ್ಯಕ್ಷ ಶಿವ ಪ್ರಸಾದ್ ಹೆಗ್ಡೆ, ಪುತ್ತಿಗೆ ಫ್ರೆಂಡ್ಸ್ ಅಧ್ಯಕ್ಷ ಮುರಳೀಧರ ಕೋಟ್ಯಾನ್, ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್, ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ, ಬೆನಕ ಇವೆಂಟ್ಸ್ ಮಾಲಕ ಗಣೇಶ ಬಾರ್ಕೂರು, ಜೆಸಿಐ ಮೂಡುಬಿದಿರೆ ಅಧ್ಯಕ್ಷ ಸುಧಾಕರ ಶೆಟ್ಟಿ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್, ನಮೋ ಫ್ರೆಂಡ್ಸ್ ನೆತ್ತೋಡಿಯ ಕಿರಣ್ ಸುವರ್ಣ, ಹೊಸ ಕನಸು ಟ್ರಸ್ಟ್ ನೆತ್ತೋಡಿಯ ಅಧ್ಯಕ್ಷ ಸಂಪತ್ ಕುಮಾರ್, ಪ್ರಮುಖರಾದ ರಾಜಾರಾಂ ನಾಗರಕಟ್ಟೆ, ಕುಮಾರ್ ಇರುವೈಲ್, ಜಯಪ್ರಕಾಶ್ ಭಂಡಾರಿ ಉಪಸ್ಥಿತರಿದ್ದರು. ಶ್ರೀನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.