ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನಕ್ಕಾಡ್ ನಲ್ಲಿರುವ ಬೇಕಲ್ ಕ್ಲಬ್ನಲ್ಲಿ ಜೂಜಾಟದಲ್ಲಿ ನಿರತರಾಗಿದ್ದ 16 ಮಂದಿಯನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿ ವಾಪಸ್ ಬರುತ್ತಿದ್ದ ವೇಳೆ ಪೊಲೀಸರೊಂದಿಗೆ ಗಲಾಟೆ ನಡೆದಿದ್ದು ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಭಿಸಿದ
ಖಚಿತ ಮಾಹಿತಿಯಂತೆ ಎಸ್ಪಿ ನೇತೃತ್ವದ ವಿಶೇಷ ತಂಡ ಮತ್ತು ಹೊಸದುರ್ಗ ಎಸ್ಐ ಸಿ.ಪಿ.ಜಿಜೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ದಾಳಿಯಲ್ಲಿ ಜೂಜಿಗೆ ಬಳಸಿದ್ದ 1,81,420 ರೂ. ವಶಪಡಿಸಿಕೊಂಡು ಜೂಜಾಡುತ್ತಿದ್ದ 16 ಮಂದಿಯನ್ನು ಬಂಧಿಸಿದ್ದರು.
ಕಾರ್ಯಾಚರಣೆ ನಡೆಸಿ ವಾಪಸಾಗುತ್ತಿದ್ದ ಪೊಲೀಸರ ವಾಹನಕ್ಕೆ ಅಪರಿಚಿತರು ಕಾರು ಅಡ್ಡಯಿಟ್ಟು ತಡೆದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.
ಎಸ್ಪಿ ಅವರ ವಿಶೇಷ ತಂಡದ ಸದಸ್ಯರಾದ ರಾಹುಲ್, ರಜೀಶ್ ಕಾಟ್ಟಾಂಪಳ್ಳಿ ಮತ್ತು ಹೊಸದುರ್ಗ ಠಾಣೆ ಸಿವಿಲ್ ಪೊಲೀಸ್ ಅಧಿಕಾರಿ ವಿ.ಪಿ.ರಮೀಜ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಸಂಬಂಧ ಕಾಞಂಗಾಡ್ ಕೃಷ್ಣಪಿಳ್ಳೆ ನಗರದ ತೋನತ್ತುವಳಪ್ಪಿಲ್ ಟಿ.ವಿ.ಸುರೇಶ್(48) ಎಂಬಾತನ ವಿರುದ್ಧ ಹೊಸದುರ್ಗ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.





