Home Crime ಕಾಪು ಸಮೀಪ ಲಾರಿ-ಸ್ಕೂಟರ್ ಢಿಕ್ಕಿ : ಓರ್ವ ಸಾವು : ಮತ್ತೊಬ್ಬರಿಗೆ ಗಾಯ..!

ಕಾಪು ಸಮೀಪ ಲಾರಿ-ಸ್ಕೂಟರ್ ಢಿಕ್ಕಿ : ಓರ್ವ ಸಾವು : ಮತ್ತೊಬ್ಬರಿಗೆ ಗಾಯ..!

ಕಾಪು: ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯಗಳಾಗಿರುವ ಘಟನೆ ವರದಿಯಾಗಿದೆ.

ಸಂದೀಪ್ ಆಚಾರ್ಯ ಅವರು ನೀಡಿದ ಮಾಹಿತಿಯ ಪ್ರಕಾರ, ಏಪ್ರಿಲ್ 20ರಂದು ಕೆಲಸದ ನಿಮಿತ್ತ ಉಡುಪಿಗೆ ತೆರಳಿ ವಾಪಸ್ಸು ಕಾಪುವಿಗೆ ಬರುತ್ತಿದ್ದ ವೇಳೆ, ಸಂಜೆ ಸುಮಾರು 4 ಗಂಟೆ ಸುಮಾರಿಗೆ ಮೂಡಬೆಟ್ಟು ಗ್ರಾಮದ ಬೃಂದಾವನ ಹೋಟೆಲ್ ಬಳಿ ಈ ಘಟನೆ ಸಂಭವಿಸಿದೆ.

ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿಯ ಚಾಲಕನು ದುಡುಕು ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿಕೊಂಡು ಹೋಗಿ, ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ಪರಿಣಾಮ ಸ್ಕೂಟರ್‌ನಲ್ಲಿದ್ದ ಸವಾರ ಹಾಗೂ ಸಹ ಸವಾರರು ಡಿವೈಡರ್‌ಗೆ ತಾಗಿ ಕೆಳಗೆ ಬಿದ್ದಿದ್ದಾರೆ.

ಘಟನೆಯ ನಂತರ ತಕ್ಷಣ ಸ್ಥಳಕ್ಕೆ ಧಾವಿಸಿದ ಸಂದೀಪ್ ಆಚಾರ್ಯ ಹಾಗೂ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಉಡುಪಿಯ ಆದರ್ಶ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ತಲೆಗೆ ಗಂಭೀರ ಗಾಯಗೊಂಡಿದ್ದ ಭೀಮಪ್ಪ ಹುನ್ನಳ್ಳಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗಾಯಗೊಂಡ ಸಹ ಸವಾರ ಸಾಗರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.