ಕಾರ್ಕಳ: ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಇದು ಭಾರತ ಸಂಸ್ಕೃತಿ ಮಹಿಳೆಯರಿಗೆ ಕೊಟ್ಟ ಗೌರವ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಸ್ಥಾನಗಳನ್ನು ಮೀಸಲಿಡುವ ಐತಿಹಾಸಿಕ “ನಾರಿ ಶಕ್ತಿ ವಂದನ್ ಅಧಿನಿಯಮ”ಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿರುವುದು ಬಹಳ ಉತ್ತಮ ಬೆಳವಣಿಗೆ, ಈ ನಿರ್ಧಾರವು ಭಾರತೀಯ ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರಿಗೆ ಸಮಾನ ಅವಕಾಶ ನೀಡುವ ಪ್ರಮುಖ ಹೆಜ್ಜೆಯಾಗಿದೆ.
ಪುರುಷ ಪ್ರಧಾನ ವರ್ಗದಲ್ಲಿ ಮಹಿಳೆಯರಿಗೆ ಅವಕಾಶಗಳು ಕಡಿಮೆ ಆಗಿತ್ತು, ಮಹಿಳೆಯರು ಮಾಡುವ ಕೆಲಸ ಕಾಣದಂತೆ ಮರೆಯಾಗುತ್ತಿತ್ತು, ಈ ನಿಟ್ಟಿನಲ್ಲಿ ಜಾರಿಗೊಳಿಸಿದ ಈ ಯೋಜನೆ ಮಹಿಳಾ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೆ ತರುವ ಸಲುವಾಗಿ ಶಾಸನಸಭೆಗಳ ಒಟ್ಟು ಸದಸ್ಯರ ಸಂಖ್ಯೆಯನ್ನು ಶೇಕಡಾ 50 ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಪ್ರಕ್ರಿಯೆಯ ಮೂಲಕ ಲೋಕಸಭೆಯ ಈಗಿರುವ 543 ಸ್ಥಾನಗಳ ಸಂಖ್ಯೆಯನ್ನು 816 ಕ್ಕೆ ಏರಿಸುವ ಸಾಧ್ಯತೆಯಿದೆ. ಹೀಗೆ ಹೆಚ್ಚಳವಾಗುವ ಒಟ್ಟು ಸ್ಥಾನಗಳಲ್ಲಿ 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಈ ಕ್ರಮದಿಂದಾಗಿ ಯಾವುದೇ ರಾಜ್ಯದ ಪ್ರಾತಿನಿಧ್ಯವು ಕಡಿಮೆಯಾಗುವುದಿಲ್ಲ ಎಂದು ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಭರವಸೆ ನೀಡಿರುತ್ತದೆ, ಒಟ್ಟಾರೆಯಾಗಿ, ಈ ಕ್ರಮವು ಭಾರತೀಯ ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ಹೊಸ ಮೈಲಿಗಲ್ಲಾಗಲಿದೆ. ರಾಜ್ಯ ವಿಧಾನಸಭೆಗಳಲ್ಲಿ ಪ್ರಸ್ತುತ ಶೇಕಡಾ 9 ರಷ್ಟಿರುವ ಮಹಿಳಾ ಶಾಸಕರ ಸಂಖ್ಯೆ ಮತ್ತು ಲೋಕಸಭೆಯಲ್ಲಿರುವ ಶೇಕಡಾ 13 ರಷ್ಟಿರುವ ಮಹಿಳಾ ಸಂಸದರ ಸಂಖ್ಯೆಯು ಈ ಕಾಯ್ದೆಯ ಜಾರಿಯಿಂದ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.





