ಉಡುಪಿ : ಹೆಬ್ರಿ ಠಾಣಾ ವ್ಯಾಪ್ತಿಯ ಕಳ್ತೂರು ಸಂತೆಕಟ್ಟೆಯಲ್ಲಿರುವ ಸಿರಿ ಮುಡಿ ಹೊಟೇಲಿನಲ್ಲಿ ಜು.20ರಂದು ನಡೆದ ಎರಡೂ ಪತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ರೌಡಿ ಶೀಟರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೌಡಿ ಶೀಟರ್ಗಳಾದ ಶ್ರೀಕಾಂತ್ ಕುಲಾಲ್ ಮತ್ತು ಸದಾನಂದ ಪೂಜಾರಿ ಎಂಬವರು ಸಂತೋಷ ನಾಯ್ಕ ಎಂಬವರೊಂದಿಗೆ ಸೇರಿಕೊಂಡು, ರೌಡಿ ರಾಜೇಶ ನಾಯ್ಕನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ತೀವ್ರಗಾಯಗೊಂಡ ರಾಜೇಶ್ ನಾಯ್ಕ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೆ ಪ್ರತಿಯಾಗಿ ಸಂತೋಷ್ ನಾಯ್ಕ್ ನೀಡಿದ ದೂರಿನಲ್ಲಿ ರಾಜೇಶ್ ನಾಯ್ಕ ಜಾತಿನಿಂದನೆ ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಲೆಯತ್ನ ಪ್ರಕರಣದಲ್ಲಿ ಕಳ್ತೂರು ಗ್ರಾಮದ ಸಂತೆಕಟ್ಟೆಯ ಶ್ರೀಕಾಂತ ಕುಲಾಲ್(29), ಕೆಂಜೂರಿನ ಸಂತೋಷ ನಾಯ್ಕ(43), ಸಂತೆಕಟ್ಟೆಯ ಸದಾನಂದ ಪೂಜಾರಿ(46) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀಕಾಂತ ಕುಲಾಲ್, ಸದಾನಂದ ಪೂಜಾರಿ, ರಾಜೇಶ್ ನಾಯ್ಕ ವಿರುದ್ಧ ಹೆಬ್ರಿ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಎಲ್ಲಾ ಆರೋಪಿ ಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನ ನೀಡಿದ್ದಾರೆ.