ಉಡುಪಿ: ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡುವ 2025ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಉಡುಪಿ ಜಿಲ್ಲೆಯ ಮೂವರು ಪೊಲೀಸ್ ಸಿಬ್ಬಂದಿ ಭಾಜನರಾಗಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್ಐ ಶ್ರೀ ಚಂದ್ರ ಶೆಟ್ಟಿ ಅವರು ತಮ್ಮ ಸೇವೆಗೆ ಈ ಗೌರವ ಪಡೆದಿದ್ದಾರೆ.ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಎಚ್ಸಿ (82) ಶ್ರೀ ಸಂತೋಷ್ ಶೆಟ್ಟಿ ಅವರು ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ ಸಲ್ಲಿಸಿದ ವಿಶಿಷ್ಠ ಸೇವೆಗಾಗಿ ಈ ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.
ಹಾಗೆಯೇ ಕಾರ್ಕಳದ ನಕ್ಸಲ್ ನಿಗ್ರಹ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆರ್.ಎಸ್.ಐ ಶ್ರೀ ಮಂಜುನಾಥ ದೇವರಮನೆ ಅವರು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ನಿರ್ವಹಿಸಿದ ಅತ್ಯುನ್ನತ ಸೇವೆಗಾಗಿ 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದಿದ್ದಾರೆ.

ಪದಕ ಪುರಸ್ಕೃತರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಕರಾವಳಿ ಕಾವಲು ಪಡೆ ಮತ್ತು ನಕ್ಸಲ್ ನಿಗ್ರಹ ಪಡೆಯ ಪ್ರಭಾರ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್ ಐಪಿಎಸ್ ಅವರು ಅಭಿನಂದಿಸಿದ್ದಾರೆ.





