ಬೀದರ್ : ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮುಚಳಂಬ್ ಗ್ರಾಮದ ನಿವಾಸಿ ಅವಿನಾಶ್ ಮಚಕುರೆ (16), ಕೋಟಗೆರಾ ಗ್ರಾಮದ ನಿವಾಸಿ ಭಾಗೇಶ್ ಮಾನೆ (16) ಮೃತ ಬಾಲಕರು.
ಮೃತ ಬಾಲಕರಿಬ್ಬರು ಸಂಬಂಧಿಕರಾಗಿದ್ದು, ಇತ್ತೀಚಿಗೆ ನಡೆದ ಹತ್ತನೇ ಪರೀಕ್ಷೆ ಬರೆದಿದ್ದರು. ಶಾಲೆ ರಜೆ ಇರುವ ಕಾರಣದಿಂದ ಭಾಗೇಶ್ ಎಂಬಾತ ಅವಿನಾಶ್ ಎಂಬುವವನ ಊರಾದ ಮುಚಳಂಬಕ್ಕೆ ಹೋಗಿದ್ದನು. ಇಂದು ಮದ್ಯಾಹ್ನ ಗೆಳೆಯರ ಜೊತೆಗೂಡಿ ಈಜಲು ಬಾವಿಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಬಸವಕಲ್ಯಾಣ ಗ್ರಾಮೀಣ ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದು, ತನಿಖೆ ಮುಂದುವರೆಸಿದ್ದಾರೆ.