Home Latest ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ʼಈದುಲ್ ಫಿತ್ರ್ʼ ಆಚರಣೆ…!!

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ʼಈದುಲ್ ಫಿತ್ರ್ʼ ಆಚರಣೆ…!!

ಉಡುಪಿ : ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಶುಕ್ರವಾರ ಸಂಭ್ರಮ ಸಡಗರದಿಂದ ಆಚರಿಸಿದರು.

 

ಉಡುಪಿ ನಗರ, ಕಾಪು, ಬ್ರಹ್ಮಾವರ ಕುಂದಾಪುರ, ಬೈಂದೂರು ಹೆಬ್ರಿ, ಕಾರ್ಕಳ ತಾಲೂಕುಗಳ ಎಲ್ಲ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಮುಸ್ಲಿಮರು ಬೆಳಗ್ಗೆ ಅರ್ಹರಿಗೆ ಫಿತರ್ ಝಕಾತ್ ನೀಡಿದ ಬಳಿಕ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಉಡುಪಿಯ ದೊಡ್ಡಣಗುಡ್ಡೆ ಮಸೀದಿಯಲ್ಲಿ ಖತೀಬರಾದ ಖಾಸಿಂ ಸಅದಿ ಅವರು ಸರ್ವ ಧರ್ಮೀಯರಿಗೆ ಈದ್ ಸಂದೇಶ ನೀಡಿದರು.

 

​ಪವಿತ್ರ ರಂಝಾನ್ ಮಾಸದಲ್ಲಿ ನಾವು ಪಾಲಿಸಿದ ಶಿಸ್ತು, ಸಂಯಮ ಮತ್ತು ಪ್ರಾರ್ಥನೆಗಳು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದೆ ಜೀವನದುದ್ದಕ್ಕೂ ಆ ದೈವಭಕ್ತಿಯನ್ನು ಉಳಿಸಿಕೊಳ್ಳುವಂತಾಗಲಿ.

​ಹಸಿದವರಿಗೆ ಉಣಬಡಿಸುವುದು ಮತ್ತು ಬಡವರ ಕಣ್ಣೀರು ಒರೆಸುವುದು ಈ ಹಬ್ಬದ ಮುಖ್ಯ ಉದ್ದೇಶ. ‘ಫಿತ್ರ್ ಝಕಾತ್’ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯ.

​ನೆರೆಹೊರೆಯವರೊಂದಿಗೆ, ಅನ್ಯಧರ್ಮೀಯ ಬಾಂಧವರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ವರ್ತಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು. ಹಬ್ಬದ ಹೆಸರಿನಲ್ಲಿ ಅನಾಚಾರ ಅಥವಾ ದುಂದುವೆಚ್ಚಗಳಿಗೆ ಅವಕಾಶ ನೀಡದೆ, ಶರೀಅತ್ ಚೌಕಟ್ಟಿನೊಳಗೆ ಸಂಭ್ರಮಿಸಬೇಕು.

​ ರಂಝಾನ್ ನಮಗೆ ಕಲಿಸಿದ ತಾಳ್ಮೆ ಮತ್ತು ದೈವಭಕ್ತಿ ನಮ್ಮ ಮುಂದಿನ ಜೀವನದ ದಾರಿದೀಪವಾಗಲಿ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಅಲ್ಲಾಹನು ಬರಕತ್ ನೀಡಲಿ. ಈದ್ ಹಬ್ಬದ ಪವಿತ್ರ ಸಂದೇಶವು ಜಾಗತಿಕ ಸಾಮರಸ್ಯ, ಪರಸ್ಪರ ಗೌರವ ಮತ್ತು ಎಲ್ಲಾ ಗಡಿಗಳನ್ನು ಮೀರಿದ ಶಾಶ್ವತ ಶಾಂತಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

​​ಖಾಸಿಂ ಸಅದಿ , ಖತೀಬರು ,ದೊಡ್ಡಣಗುಡ್ಡೆ ,ಉಡುಪಿ