ಮೂಡುಬಿದಿರೆ : ಬಸ್ಗೆ ಹಾನಿ ಮಾಡಿ 5ಲಕ್ಷ ರೂ. ವಸೂಲಿ ಮಾಡಿರುವ ಪ್ರಕರಣದಲ್ಲಿ ಮೂಡುಬಿದಿರೆ ಪೊಲೀಸರು ನಿನ್ನೆ ಹಿಂಜಾವೇ ಮುಖಂಡ ಸಮಿತ್ ರಾಜ್ ಧರೆಗುಡ್ಡೆಯನ್ನು ಬಂಧಿಸಿದ್ದಾರೆ.
ಮೈಟ್ ಕಾಲೇಜು ಬಳಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವವರಿಗೆ ಬಸ್ ಮಾಲಕ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ಎಬಿವಿಪಿ, ಬಿಜೆಪಿ ಸಹಿತ ಸಾರ್ವಜನಿಕರು ಪ್ರತಿಭಟಿಸಿದ್ದರು. ಈ ವೇಳೆ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ದರೆಗುಡ್ಡೆಯನ್ನು ಮೂಡುಬಿದಿರೆ ಪೊಲೀಸರು ಗುರುವಾರ ಕಾರ್ಕಳದ ವಾಣಿಜ್ಯ ಸಂಕೀರ್ಣವೊಂದರಿಂದ ಬಂಧಿಸಿದ್ದಾರೆ. ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
2024ರ ನವಂಬರ್ 11ರಂದು ಮಿಜಾರು ಬಳಿ ಘಟನೆ ನಡೆದಿತ್ತು. ‘ಮಾಸ್ಟರ್” ಬಸ್ ಢಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ಸವಾರರಾದ ಸುಮಿತ್ರಾ ಮತ್ತು ಅವರ ಪುತ್ರಿ ಸಾನ್ವಿ ಗಾಯಗೊಂಡಿದ್ದರು. ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಘಟನೆ ಸಂಭವಿಸಿದೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದರು.
ಅಂದು ನಡೆದ ಪ್ರತಿಭಟನೆಯಲ್ಲಿ ಸಮಿತ್ ರಾಜ್ ಧರೆಗುಡ್ಡೆಯೂ ಪಾಲ್ಗೊಂಡಿದ್ದರು. ಅಲ್ಲದೆ ಗಾಯಾಳುಗಳಿಗೆ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಈ ಹೋರಾಟಕ್ಕೆ ಮಣಿದ ಬಸ್ ಮಾಲಕರು ಘಟನೆ ಸಂಭವಿಸಿದ ಕೆಲವೇ ಗಂಟೆಗೊಳಗಾಗಿ ಬಸ್ ಮಾಲೀಕ ರೂ. 5ಲಕ್ಷವನ್ನು ಗಾಯಾಳುಗಳಿಗೆ ಪರಿಹಾರ ನೀಡಿದ್ದರು.
ಆದರೆ ಈ ವಿಚಾರದಲ್ಲಿ ತನಗೆ ಬೆದರಿಕೆ ಹಾಗೂ ವಸೂಲಿಗೆ ಇಳಿದಿದ್ದರು ಎಂದು ಆರೋಪಿಸಿ ಬಸ್ ಮಾಲೀಕರು ಕೇಸು ದಾಖಲಿಸಿದ್ದ ಹಿನ್ನೆಲೆಯಲ್ಲಿ ಸಮಿತ್ ರಾಜ್ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.