Home Karavali Karnataka ಆಶಾ ಮೇಲ್ವಿಚಾರಕರನ್ನು ಕರ್ತವ್ಯದಲ್ಲಿ ಮುಂದುವರೆಸುವಂತೆ ಸರ್ಕಾರಕ್ಕೆ ಪತ್ರ ಬರೆದ ಗಂಟಿಹೊಳೆ…!!

ಆಶಾ ಮೇಲ್ವಿಚಾರಕರನ್ನು ಕರ್ತವ್ಯದಲ್ಲಿ ಮುಂದುವರೆಸುವಂತೆ ಸರ್ಕಾರಕ್ಕೆ ಪತ್ರ ಬರೆದ ಗಂಟಿಹೊಳೆ…!!

ಬೈಂದೂರು : ರಾಷ್ಟೀಯ ಆರೋಗ್ಯ ಅಭಿಯಾನದಡಿ 2007-08 ಸಾಲಿನಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಆಶಾ ಮೇಲ್ವಿಚಾರಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಪತ್ರದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಶಾ ಮೇಲ್ವಿಚಾರಕರು ರಾಜ್ಯದಲ್ಲಿ ಒಟ್ಟು 195 ಜನರಿದ್ದು ಕಳೆದ 17 ವರ್ಷದಿಂದ ಒಂದೇ ಹುದ್ದೆಯಲ್ಲಿ ಅತೀ ಕಡಿಮೆ ಸಂಬಳದಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತಾರೆ. ಪ್ರಸ್ತುತ ಒಂದೇ ಬಾರಿಗೆ ಏಕಾಏಕಿ ಕರ್ತವ್ಯದಿಂದ ಬಿಡುಗಡೆಗೊಳಿಸಲು ಆದೇಶವಾಗಿದೆ. ಇದರಿಂದಾಗಿ ಎಲ್ಲಾ 195 ಆಶಾ ಮೇಲ್ವಿಚಾರಕರಿಗೆ ಅನ್ಯಾಯವಾಗಿದೆ ಹಾಗೂ ಉದ್ಯೋಗ ಕಳೆದು ಕೊಂಡು ಮುಂದಿನ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಅವರೆಲ್ಲರನ್ನು ನಡುನೀರಿನಲ್ಲಿ ಕೈ ಬಿಟ್ಟಂತೆ ಆಗಿದೆ ಎಂದು ಕಿಡಿ ಕಾರಿದ್ದಾರೆ.

ಹಾಗಾಗಿ ಆಶಾ ಕಾರ್ಯಕ್ರಮದ ಪ್ರಗತಿಗೆ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿರುವುದರಿಂದ ಸದರಿ ಆಶಾ ಮೇಲ್ವಿಚಾರಕರನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.