ಕಾರ್ಕಳ: ರಂಗನಪಲ್ಕೆ, ಕೌಡೂರು ಗ್ರಾಮದ ಕವಿತಾ ಕೃಪಾಲಿನಿ ಅವರಿಗೆ ಸ್ಟೇಷನರಿ ಮತ್ತು ಪುಸ್ತಕ ವ್ಯಾಪಾರಕ್ಕೆ ಪರಿಕರ ಒದಗಿಸುವುದಾಗಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಪ್ರಧಾನಮಂತ್ರಿ ರೋಜ್ಗಾರ್ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಯತ್ನಿಸಿ ದೂಪದಕಟ್ಟೆಯ ರಾಘವೇಂದ್ರ ಎಸ್. ಎಂಬಾತನಿಂದ ಮೋಸ ಹೋಗಿದ್ದಾರೆ. ಆರೋಪಿಯು ಜೆರಾಕ್ಸ್, ಲ್ಯಾಮಿನೇಷನ್ ಯಂತ್ರಗಳು, ಲ್ಯಾಪ್ಟಾಪ್ ಮತ್ತು ಇತರ ಪರಿಕರ ಕೊಡಿಸುವುದಾಗಿ ನಂಬಿಸಿ, ಲಕ್ಷ್ಮೀ ಎಂಟರ್ಪ್ರೈಸಸ್ ಹೆಸರಿನಲ್ಲಿ ನಕಲಿ ಕೊಟೇಶನ್ ನೀಡಿದ್ದಾನೆ.
ಕವಿತಾ ಅವರು ಕಣಜಾರು ಕೆನರಾ ಬ್ಯಾಂಕ್ ಶಾಖೆಯಿಂದ 9.50 ಲಕ್ಷ ರೂ. ಸಾಲ ಪಡೆದಿದ್ದು, ಈ ಹಣವನ್ನು ಡಿ. 18ರಂದು ರಾಘವೇಂದ್ರ ಹೇಳಿದ ಖಾತೆಗೆ ಜಮೆ ಮಾಡಿದ್ದರು. ಹಣ ಜಮೆಯಾದ ಅನಂತರ 25 ದಿನಗಳಲ್ಲಿ ಸಾಮಗ್ರಿ ನೀಡುವುದಾಗಿ ರಾಘವೇಂದ್ರ ಭರವಸೆ ನೀಡಿದ್ದರೂ ಅವುಗಳನ್ನು ನೀಡದೆ ವಂಚಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಕಾರ್ಕಳ ಠಾಣೆಗೆ ದೂರು ನೀಡಿದ್ದು, ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಗಾಂಧಿನಗರದಲ್ಲಿ ಆರೋಪಿ ರಾಘವೇಂದ್ರನನ್ನು ವಶಕ್ಕೆ ಪಡೆದಿದ್ದಾರೆ.
ಜೂ. 7ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ಈತ ಈ ಹಿಂದೆ ಕೂಡ ಹಲವರಿಗೆ ಇದೇ ರೀತಿ ವಂಚಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.