Home Crime ಹೆಬ್ರಿ: ಬೆಂಕಿ ತಗುಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಸ್ಪೋಟಕ ತಿರುವು : ಅಕ್ರಮವಾಗಿ ಸಿಲಿಂಡರ್ ರಿಫಿಲ್...

ಹೆಬ್ರಿ: ಬೆಂಕಿ ತಗುಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಸ್ಪೋಟಕ ತಿರುವು : ಅಕ್ರಮವಾಗಿ ಸಿಲಿಂಡರ್ ರಿಫಿಲ್ ಮಾಡುವಾಗ ಬೆಂಕಿ ಹೊತ್ತಿಕೊಂಡು ಸಾವು…!!

ಗಂಡನ ಸಾವಿನ ರಹಸ್ಯ ಬಿಚ್ಚಿಟ್ಟ ಪತ್ನಿ : ಗ್ಯಾಸ್ ರಿಫಿಲ್ಲಿಂಗ್ ದಂಧೆ ನಡೆಸುತ್ತಿದ್ದ ಅತ್ತೆ,ಮಾವನ ವಿರುದ್ಧ ಆರೋಪ…

ಹೆಬ್ರಿ: ವ್ಯಕ್ತಿಯೊಬ್ಬರು ಬೆಂಕಿ ತಗುಲಿ ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆಯ ಕುರಿತು ಇದೀಗ ಸ್ಪೋಟಕ ಸಂಗತಿ ಬಯಲಾಗಿದೆ.

ಮೃತಪಟ್ಟ ವ್ಯಕ್ತಿಯ ಪತ್ನಿ ಬೆಂಕಿಯ ರಹಸ್ಯ ಬಾಯಿ ಬಿಟ್ಟಿದ್ದು,ಗ್ಯಾಸ್ ರಿಫಿಲ್ಲಿಂಗ್ ಸಂದರ್ಭದಲ್ಲಿ ಬೆಂಕಿ ತಗುಲಿ ತನ್ನ ಗಂಡನ ಸಾವನ್ನಪ್ಪಿದ್ದು ಇದಕ್ಕೆ ಅತ್ತೆ ಹಾಗೂ ಮಾವನೇ ಕಾರಣ ಎಂದು ಆರೋಪಿಸಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೆಬ್ರಿ ತಾಲೂಕಿನ ಮಂಡಾಡಿಜೆಡ್ಡು ಎಂಬಲ್ಲಿನ ನಿವಾಸಿ ಅನೂಪ್ ನಾಯಕ್ ಎಂಬವರು ಕಳೆದ ಏ.11 ರಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಸುಟ್ಟಗಾಯಗಳೊಂದಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಏ 17 ರಂದು ಮೃತಪಟ್ಟಿರುವ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅನೂಪ್ ಅವರು ಮನೆಯಲ್ಲಿ ಅಕ್ರಮವಾಗಿ ಗೃಹ ಬಳಕೆಯ ಸಿಲಿಂಡರಿನ ಗ್ಯಾಸನ್ನು ವಾಣಿಜ್ಯ ಬಳಕೆಯ ಸಿಲಿಂಡರ್ ಗೆ ರಿಫಿಲ್ಲಿಂಗ್ ಮಾಡುವಾಗ ಆಶಾ ಅವರು ಬೇಜವಾಬ್ದಾರಿಯಿಂದ ಲೈಟರ್ ಉರಿಸಿದ ಪರಿಣಾಮದಿಂದ ಬೆಂಕಿ ಹೊತ್ತಿಕೊಂಡು ಅನೂಪ್ ಅವರಿಗೆ ಗಂಭೀರ ಸುಟ್ಟಗಾಯದಿಂದ ಮೃತಪಟ್ಟಿದ್ದು ಇದಕ್ಕೆ ಮೃತ ಅನೂಪ್ ಅವರ ತಂದೆ ಅನಂತ ನಾಯಕ್ ಹಾಗೂ ಆಶಾ ಅವರೇ ಕಾರಣವೆಂದು ಸೊಸೆ ರೇಶ್ಮಾ ಆರೋಪಿಸಿದ್ದಾರೆ.

ಗ್ಯಾಸ್ ರಿಫಿಲ್ಲಿಂಗ್ ನಿಂದ ಬೆಂಕಿ ಹೊತ್ತಿಕೊಂಡಿದ್ದು,ಬಳಿಕ ಅದನ್ನು ಮುಚ್ಚಿ ಹಾಕುವ ಸಲುವಾಗಿ ಸಿಲಿಂಡರ್ ಸ್ಪೋಟದ ಸ್ಥಳವನ್ನು ಸ್ವಚ್ಛಗೊಳಿಸಿ ಸಾಕ್ಷ್ಯನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ಮಾಹಿತಿ ಪ್ರಕಾರ ಅನಂತ ನಾಯಕ್( ಅಂತೋನಿ) ಅವರು ಕಳೆದ ಹಲವಾರು ವರ್ಷಗಳಿಂದ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ ನಡೆಸುತ್ತಿದ್ದರು ಎನ್ನಲಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸಿದ್ದಲ್ಲಿ ಪ್ರಕರಣದ ಸತ್ಯಾಂಶ ಬಯಲಿಗೆ ಬರಲಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ