ಉಡುಪಿ : ಕಂಬಳ ಧರ್ಮಾತೀತ, ಪಕ್ಷಾತೀತವಾಗಿ ನಡೆಯುವ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ರಾಜಕೀಯ ಬೆರೆಸಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಉಡುಪಿಯ 80 ಬಡಗುಬೆಟ್ಟುವಿನಲ್ಲಿ ಕೋಟಿಚೆನ್ನಯ ಕಂಬಳಕರೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಳಕ್ಕೆ ರಾಜ್ಯ ಮಾನ್ಯತೆ ನೀಡಿ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಲ್ಲಿ ಆದೇಶಿಸಿ ರಾಜ್ಯ ಕಂಬಳ ಸಮಿತಿಯನ್ನು ರಚಿಸಿದ್ದಾರೆ. ಕಂಬಳವನ್ನು ಶಿಸ್ತುಬದ್ಧವಾಗಿ ನಡೆಸಲು ಅನುದಾನ ಒದಗಿಸುವ ಬಗ್ಗೆ ಹಾಗೂ ಕಂಬಳ ಆಯೋಜನೆ ಮಾಡುವಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೇ ನಡೆಸುವುದು ರಾಜ್ಯ ಕಂಬಳ ಸಮಿತಿಯ ಉದ್ದೇಶ.
80 ಬಡಗುಬೆಟ್ಟುವಿನಲ್ಲಿ ಕಂಬಳ ಆಯೋಜನೆ ಮಾಡುವ ಬಗ್ಗೆ ರಾಜ್ಯ ಕಂಬಳ ಅಸೋಸಿಯೇಶನ್ಗೆ ಕಂಬಳ ನಡೆಸುವ ಬಗ್ಗೆ ಮನವಿ ನೀಡಿದ್ದರು. ಮನವಿಯನ್ನು ಪರಿಶೀಲಿಸಿ ಕಂಬಳ ನಡೆಸಲು ಅನುಮತಿ ನೀಡಲಾಗಿದೆ. ಕಂಬಳದ ಶಿಷ್ಟಾಚಾರದ ಪ್ರಕಾರ ಯಾವ ಭಾಗದಲ್ಲಿ ಕಂಬಳ ನಡೆಯುತ್ತದೆಯೋ ಆ ಭಾಗದ ಶಾಸಕರು ಕಂಬಳ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಅಂತೆಯೇ ಬಡಗುಬೆಟ್ಟು ಕಂಬಳದಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಅಧ್ಯಕ್ಷರಾಗಿದ್ದಾರೆ. ಕೋಟಿ ಚೆನ್ನಯ ಜೋಡುಕರೆ ಕಂಬಳ ನಡೆಸಲು ರಾಜ್ಯ ಕಂಬಳ ಸಮಿತಿಯಲ್ಲಿ ನೋಂದಣಿ ಮಾಡಿಕೊಂಡು ಏಪ್ರಿಲ್ 25ರಂದು ಕಂಬಳ ನಡಸಲು ಅನುಮತಿಯನ್ನು ನೀಡಲಾಗಿದೆ ಎಂದರು.
ಬಡಗುಬೆಟ್ಟು ಕಂಬಳಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಬೇಕೆಂದು ಜಿಲ್ಲಾಡಳಿತಕ್ಕೆ ತಿಳಿಸಿದ್ದೇನೆ. ಅಲ್ಲದೇ ಸರ್ಕಾರದ ವತಿಯಿಂದ ಕಂಬಳ ದೊರಕಿಸಿಕೊಡುವ ಬಗ್ಗೆಯೂ ಸೂಚಿಸಿರುವುದಾಗಿ ತಿಳಿಸಿದರು. ಕಂಬಳದಲ್ಲಿ ರಾಜಕೀಯ ಬೆರೆಸಲು ಬಿಡುವುದಿಲ್ಲ. ಅದು ಯಾವುದೇ ಪಕ್ಷವಿರಲಿ ಪಕ್ಷಾತೀತ, ಧರ್ಮಾತೀತ ಕಂಬಳ ನಡೆಯಬೇಕು. ಒಬ್ಬಿಬ್ಬರು ಸೇರಿ ಕಂಬಳ ನಡೆಯುವುದಿಲ್ಲ. ಈಗ ಎದ್ದಿರುವ ಗೊಂದಲವನ್ನು ಮುಂದಿನ ದಿನಗಳಲ್ಲಿ ಪರಿಹರಿಸುವ ಪ್ರಯತ್ನ ಮಾಡುತ್ತೇವೆ. ಉಡುಪಿ ಕಂಬಳ ಎಂಬ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಇಲ್ಲಿ ಕಂಬಳ ನಡೆದೇ ನಡೆಯುತ್ತದೆ ಎಂದರು.



