ಉಡುಪಿ: ವೆಂಕಟಾಚಲ ಭಟ್, ಕುತ್ಪಾಡಿ ಆನಂದ್ ಗಾಣಿಗ ಅವರಂತಹ ಮೇರು ವ್ಯಕ್ತಿತ್ವದವರು ಆರಂಭಿಸಿದ ರಂಗಭೂಮಿ ಉಡುಪಿ ಆರು ದಶಕ ಪೂರ್ಣಗೊಳಿಸಿದೆ. ಸಂಸ್ಥೆಯು ಪ್ರತಿವರ್ಷ ಹಮ್ಮಿಕೊಳ್ಳುವ ಕನ್ನಡ ನಾಟಕ ಸ್ಪರ್ಧೆ ರಾಜ್ಯಕ್ಕೇ ಮಾದರಿಯಾಗಿದೆ. ರಂಗ ಶಿಕ್ಷಣವಂತೂ ಮಕ್ಕಳ ಭವಿಷ್ಯಕ್ಕೆ ದೊಡ್ಡ ಕೊಡುಗೆಯಾಗಿದೆ. ಗುಣಮಟ್ಟದ ಕಾರ್ಯಕ್ರಮಗಳ ಸರಣಿಯೊಂದಿಗೆ ನಿರಂತರ ಕ್ರಿಯಾಶೀಲತೆಯೇ ರಂಗಭೂಮಿ ಉಡುಪಿಯ ಆಕರ್ಷಣೆಯಾಗಿದೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಶ್ಲಾಘಿಸಿದರು.
ಉಡುಪಿಯ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ರಂಗಭೂಮಿ ಉಡುಪಿ ಸಂಸ್ಥೆಯ 61ನೇ ವಾರ್ಷಿಕ ಮಹಾ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ್ ಶೆಟ್ಟಿ ಮಾತನಾಡಿ, ಸಂಸ್ಥೆಗೆ ಸದಸ್ಯರು ಹಾಗೂ ಹಿತೈಷಿಗಳೇ ಆಧಾರವಾಗಿದ್ದಾರೆ. ಡಾ. ಎಚ್.ಎಸ್. ಬಲ್ಲಾಳ್ ಅವರು ಗೌರವಾಧ್ಯಕ್ಷರಾಗಿರುವುದು ನಮಗೆ ದೊಡ್ಡ ಶಕ್ತಿಯಾಗಿದೆ. ಆರ್ಥಿಕ ನಷ್ಟದಲ್ಲಿದ್ದರೂ ನಾಟಕ ಕಲೆಯ ಉಳಿವಿಗೆ ಸೇವೆ ನಡೆಸುತ್ತಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಧನ ಸಹಾಯ ನೀಡಿ ರಂಗಭೂಮಿಯನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು ಎಂದರು.
ಸಹಕಾರ್ಯದರ್ಶಿ ವಿವೇಕಾನಂದ ಎನ್. ಕಳೆದ ವಾರ್ಷಿಕ ಮಹಾಸಭೆಯ ನಡಾವಳಿ, ರವೀಂದ್ರ ಕೆ. ಆಚಾರ್ಯ ಕಳೆದ ವರ್ಷದ ಪರಿಶೋಧಿತ ಲೆಕ್ಕಪತ್ರ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಅವರು ವರ್ಷದ ಕಾರ್ಯ ಚಟುವಟಿಕೆಗಳ ವರದಿ ಮಂಡಿಸಿದರು. ಕಳೆದ ಆರ್ಥಿಕ ವರ್ಷದಲ್ಲಿ ನಿಧನರಾದ ನಾಡಿನ ರಂಗಭೂಮಿ ಸದಸ್ಯರಿಗೆ ಡಾ.ವಿಷ್ಣುಮೂರ್ತಿ ಪ್ರಭು ನುಡಿನಮನ ಸಲ್ಲಿಸಿದರು.
ಸಹಕಾರ್ಯದರ್ಶಿ ಶ್ರೀಪಾದ ಹೆಗಡೆ, ಶಶಿಪ್ರಭಾ ಕಾರಂತ ಸ್ವಾಗತಿಸಿದರು. ಪೂರ್ಣಿಮಾ ಸುರೇಶ್ ಪರಿಚಯಿಸಿದರು. ಗಿರೀಶ್ ತಂತ್ರಿ ವಂದಿಸಿದರು.
ರೋಟರಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್, ಅಲಯನ್ಸ್ ಜಿಲ್ಲಾ ಗವರ್ನರ್ ಸುನೀಲ್ ಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರ ಪಟ್ಟಣ ಬ್ಯಾಂಕ್ಗಳ ಮಹಾ ಮಂಡಲದ ನಿರ್ದೇಶಕ ಎಚ್. ಜಯಪ್ರಕಾಶ್ ಕೆದ್ಲಾಯ, ಸಾಹಿತಿ ಡಾ. ಮಾಧವಿ ಎಸ್. ಭಂಡಾರಿ, ಡಾ. ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ್ ಶೆಟ್ಟಿ ಎಕ್ಕಾರು, ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಪ್ರೊ. ಸುಕನ್ಯಾ ಮೇರಿ ಜೆ., ಡಾ. ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನಾ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ವಾರ್ಷಿಕ ಯಕ್ಷ ಸಿರಿ ಪ್ರಶಸ್ತಿಗೆ ಆಯ್ಕೆಯಾದ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಅವರುಗಳನ್ನು ಸನ್ಮಾನಿಸಲಾಯಿತು.




