Home Crime ಕುಂದಾಪುರ: ಇಬ್ಬರಿಗೆ ಚೂರಿಯಿಂದ ಇರಿದು ಕೊಲೆ ಬೆದರಿಕೆ : ಪ್ರಕರಣ ದಾಖಲು…!!

ಕುಂದಾಪುರ: ಇಬ್ಬರಿಗೆ ಚೂರಿಯಿಂದ ಇರಿದು ಕೊಲೆ ಬೆದರಿಕೆ : ಪ್ರಕರಣ ದಾಖಲು…!!

ಕುಂದಾಪುರ: ಅತ್ತಿಗೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ ಯುವಕ ಹಾಗೂ ಆತನ ಸ್ನೇಹಿತನಿಗೆ ಚೂರಿಯಿಂದ ಇರಿದು ಕೊಲೆ ಬೆದರಿಕೆ ಹಾಕಿರುವ ಘಟನೆ ತಲ್ಲೂರು ಗ್ರಾಮದ ಪಿಂಗಾಣಿಗುಡ್ಡೆಯಲ್ಲಿ ನಡೆದಿದೆ.

ಆಗಸ್ಟ್ 12ರಂದು ರಾತ್ರಿ ಸುಮಾರು 9 ಗಂಟೆಗೆ ರಾಮಕುಮಾರ್ (24) ಅವರು ತಮ್ಮ ಸ್ನೇಹಿತ ಮುರುಳಿ ಹಾಗೂ ಹೆಂಡತಿಯ ಅಕ್ಕನೊಂದಿಗೆ ಬಾವಿ ಬಳಿ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಆಕಾಶನನ್ನು, ತನ್ನ ಹೆಂಡತಿಯ ಅಕ್ಕನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇಕೆ ಎಂದು ರಾಮಕುಮಾರ್ ಪ್ರಶ್ನಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಆಕಾಶ, ತನ್ನ ಬಳಿ ಇದ್ದ ಚೂರಿಯಿಂದ ರಾಮಕುಮಾರ್ ಅವರ ಎಡಭಾಗದ ಹೊಟ್ಟೆಗೆ ಇರಿದಿದ್ದಾನೆ. ತಪ್ಪಿಸಲು ಬಂದ ಮುರುಳಿಗೂ ಎಡಭಾಗದ ಬೆನ್ನಿಗೆ ಚೂರಿಯಿಂದ ಇರಿದಿದ್ದು, ರಾಮಕುಮಾರ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರ ಬಲಕೈಗೂ ಚೂರಿಯಿಂದ ಇರಿದಿದ್ದಾನೆ.

ಘಟನೆಯಲ್ಲಿ ಇಬ್ಬರಿಗೂ ಗಾಯವಾಗಿ ರಕ್ತಸ್ರಾವವಾಗಿದ್ದು, ಬಳಿಕ ಆರೋಪಿಯು “ಈ ದಿನ ನೀವು ಉಳಿದುಕೊಂಡಿದ್ದೀರಿ, ಮುಂದೆ ನಿಮ್ಮನ್ನು ಸಾಯಿಸದೇ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ.

ಗಾಯಗೊಂಡ ರಾಮಕುಮಾರ್ ಹಾಗೂ ಮುರುಳಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.