ಮಂಗಳೂರು : ಮ್ಯಾಟ್ರಿಮೋನಿ ಆನ್ಲೈನ್ ಪ್ಲಾಟ್ಫಾರಂ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಬಳಿಕ ಮದುವೆಯಾಗುವುದಾಗಿ ಹೇಳಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಮತ್ತು ಆತನಿಗೆ ಸಹಕಾರ ನೀಡುತ್ತಿದ್ದ ಆರೋಪದಲ್ಲಿ ಕಾವೂರು ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುಶಾಂತ್ ಪೂಜಾರಿ ಯಾನೆ ಸುಶಾಂತ್ ಅಂಕುಶ್ ಪೂಜಾರಿ ಯಾನೆ ಸುಶಾಂತ್ ಜಿ. ಕಕೇರಾ (32) ಮತ್ತು ಭಾಸ್ಕರ ಎಂದು ಗುರುತಿಸಲಾಗಿದೆ.
ಈ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾ ಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಸುಶಾಂತ್ ಪೂಜಾರಿ ಎಂಬಾತ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈನಲ್ಲಿ ಕಳೆದ ವರ್ಷದ ಫೆಬ್ರವರಿ 2ರಂದು ತನ್ನನ್ನು ಮದುವೆಯಾಗಿ ಹಂತ ಹಂತವಾಗಿ 6,60,000 ರೂ.ವನ್ನು ಪಡೆದುಕೊಂಡಿದ್ದ. ಹಾಗೇ ಕಳೆದ ವರ್ಷದ ನವೆಂಬರ್ 15ರಿಂದ ನಾಪತ್ತೆಯಾಗಿದ್ದ. ನಂತರದ ದಿನಗಳಲ್ಲಿ ಈ ಬಗ್ಗೆ ತಾನು ಅನುಮಾನ ಗೊಂಡು ಸುಶಾಂತ್ ಪೂಜಾರಿಯ ಹಿನ್ನೆಲೆಯ ಬಗ್ಗೆ ವಿಚಾರಿಸಿದಾಗ ಆತ ಹಲವು ಕಡೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಮೋಸ ಮಾಡಿರುವ ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದು ಬಂದಿತ್ತು ಎಂದು ಸಂತ್ರಸ್ಥ ಯುವತಿಯು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಫೆ.5ರಂದು ಸುಶಾಂತ್ ಪೂಜಾರಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದರು. ಆವಾಗ ಈತನು ಮ್ಯಾಟ್ರಿಮೋನಿ ಆನ್ಲೈನ್ ಪ್ಲಾಟ್ ಫಾರಂ ಮೂಲಕ 2021ರಲ್ಲಿ ಉಡುಪಿಯ ಯುವತಿಯನ್ನು ಮದುವೆ ಆಗಿದ್ದ. ಅಲ್ಲದೆ ಉಡುಪಿಯ ಇಬ್ಬರು ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅವರಿಂದಲೂ ಹಣ ಪಡೆದುಕೊಂಡಿದ್ದ.
ಮುಂಬೈ ಮತ್ತು ಬೆಂಗಳೂರಿನಲ್ಲಿ ಕೂಡ ತಲಾ ಇಬ್ಬರು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದ. ಕಾರ್ಕಳದ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದ. ಈತನಿಗೆ ಮುಲ್ಕಿಯ ಭಾಸ್ಕರ್ ಎಂಬಾತ ಸಹಕರಿಸುತ್ತಿದ್ದ ಎಂದು ತನಿಖೆ ನಡೆಸಿರುವ ಪೊಲೀಸರು ತಿಳಿಸಿದ್ದಾರೆ.
ಕಾವೂರು ಠಾಣೆಗೆ ದೂರು ನೀಡಿದ ಯುವತಿಗೆ ಆರೋಪಿ ಮುಲ್ಕಿಯ ಭಾಸ್ಕರನು ಹಣ ದೋಚುವ ಉದ್ದೇಶ ದಿಂದಲೇ ಸುಶಾಂತ್ ತನ್ನ ಅಳಿಯ ಎಂದಿದ್ದ. ಅಲ್ಲದೆ ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬೈನಲ್ಲಿ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡು ಮದುವೆ ನಡೆಸಿದ್ದ.
ಪ್ರಮುಖ ಆರೋಪಿ ಸುಶಾಂತ್ ಪೂಜಾರಿಯ ವಿರುದ್ಧ ಉರ್ವ, ಕೋಟ ಮತ್ತು ಮಹಾರಾಷ್ಟ್ರದ ಅರ್ನಾಲ್ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಸಹಿತ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



