ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದ ಉಪ್ಪಿಕುದ್ರು ಎಂಬಲ್ಲಿ ಅಂಬ್ಯುಲೆನ್ಸ್ ಅನ್ನು ಕೃಷಿ ಭೂಮಿಗೆ ಇಳಿಸಿ ರೋಗಿಯ ಪ್ರಾಣ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪಿನ ಕುದ್ರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿನ ಕಳುವಿನ ಬಾಗಿಲು ಪ್ರದೇಶದಲ್ಲಿ ಸುಮಾರು 35 ಕುಟುಂಬಗಳು ವಾಸಿಸುತ್ತಿದ್ದು, ಮೂಲ ಸೌಕರ್ಯವಿಲ್ಲದೇ ಜನರು ಪರದಾಡುತ್ತಿದ್ದಾರೆ.
ಇತ್ತೀಚೆಗೆ ಗ್ರಾಮಸ್ಥರೊಬ್ಬರಿಗೆ ಹೃದಯಾಘಾತ ಉಂಟಾಗಿತ್ತು. ರಸ್ತೆ ಸಂಪರ್ಕವಿಲ್ಲದೇ ಕುಟುಂಬ ಗೋಳಾಡಿದೆ. ನಂತರ ಬೆಳೆ ಬೆಳೆದ ಗದ್ದೆಗೆ ಅಂಬ್ಯುಲೆನ್ಸ್ ಇಳಿಸಿ ಹರಸಾಹಸ ಬಿಟ್ಟು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗದ್ದೆಯಲ್ಲಿ ಅಂಬ್ಯುಲೆನ್ಸ್ ಸಂಚರಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿನ ನಿವಾಸಿಗಳು ಕನಿಷ್ಠ ಮೂಲ ಸೌಕರ್ಯ ಒದಗಿಸುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಇಲ್ಲಿ ವಾಸಿಸುವ 300ಕ್ಕೂ ಅಧಿಕ ಜನರು ನರಕ ಸದೃಶ ಬದುಕು ಸಾಗಿಸುತ್ತಿದ್ದಾರೆ.
ಒಂದೊಮ್ಮೆ ಇಲ್ಲಿನ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾದ್ರೆ, ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡಬೇಕಾಗಿದೆ. ಒಂದೊಮ್ಮೆ ಯಾರಾದ್ರೂ ಮೃತಪಟ್ಟರೂ ಕೂಡ ಈ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಕೂಡ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲ.



