ಭಟ್ಕಳ: ಗಾಂಜಾ ಮಾರಾಟ ಜಾಲದ ವಿರುದ್ಧ ಭಟ್ಕಳ ಶಹರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಯುವಕನೊಬ್ಬನನ್ನು ಬಂಧಿಸಿ, ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಹೆಬಳೆ ನಿವಾಸಿ ಅಬ್ರಾರ್ ಶೇಖ್(24) ಎಂದು ಗುರುತಿಸಲಾಗಿದೆ.
ಭಟ್ಕಳ ನಗರದ ಮುಗ್ಗುಂಕಾಲೋನಿಯ ಮೌಂಟೆನ್ ಗೌಂಡ್ ಸಮೀಪ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಯು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಸಂಗ್ರಹಿಸಿ ಇಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭ ಸುಮಾರು 84 ಗ್ರಾಂ ತೂಕದ, ಅಂದಾಜು 5,000 ರೂ. ಮೌಲ್ಯದ ಗಾಂಜಾ, ಗಾಂಜಾವನ್ನು ಸಣ್ಣ ಪ್ಯಾಕೆಟ್ಗಳಾಗಿ ಪ್ಯಾಕ್ ಮಾಡಲು ಬಳಸಲಾಗುತ್ತಿದ್ದ 12 ಖಾಲಿ ಪ್ಲಾಸ್ಟಿಕ್ ಸ್ಯಾಚೆಟ್ಗಳು, ಗಾಂಜಾ ಸಾಗಾಟ ಹಾಗೂ ಸಂಗ್ರಹಕ್ಕಾಗಿ ಬಳಸಲಾಗುತ್ತಿದ್ದ ಬಿಳಿ ಬಣ್ಣದ ಹೊಂಡಾ ಸಿಟಿ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ನವೀನ್ ಎಸ್. ನಾಯ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.




