ಉಡುಪಿ : ನಗರಸಭೆ ಕಛೇರಿಯ ಶೌಚಾಲಯದ ತ್ಯಾಜ್ಯ ನೀರಿನ ಕೊಳವೆಯ ಜೋಡಣೆ ಕಳಚಿಕೊಂಡಿದ್ದು, ಇದರಿಂದಾಗಿ ಶೌಚತ್ಯಾಜ್ಯಗಳು ಹೊರಬೀಳುತ್ತಿದ್ದು, ಪರಿಸರದಲ್ಲಿ ರೋಗ ಹರಡುವ ಭೀತಿ ಎದುರಾಗಿದೆ.
ಮಾರಕ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ಸಾಧ್ಯತೆ ಇದೆ. ಸನಿಹದಲ್ಲಿ ಕವಿ ಮುದಣ್ಣ ಮಾರ್ಗದಿಂದ ನಿತ್ಯಾನಂದ ಮಂದಿರಕ್ಕೆ ಸಂಪರ್ಕಿಸುವ ರಸ್ತೆ ಹಾದುಹೋಗುತ್ತಿದ್ದು, ಈ ರಸ್ತೆಯಲ್ಲಿ ಭಕ್ತಾದಿಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ. ಪಕ್ಕದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು ಇದೆ.
ಹೊರಹೊಮ್ಮಿತ್ತಿರುವ ಗಬ್ಬುವಾಸನೆಗೆ ಮೂಗು ಮುಚ್ಚಿ ತಿರುಗಾಡ ಬೇಕಾದ ಸಮಸ್ಯೆಯು ಇಲ್ಲಿ ಎದುರಾಗಿದೆ. ತಕ್ಷಣ ನಗರಾಡಳಿತ ಶೌಚಾಲಯದ ಕೊಳವೆ ದುರಸ್ತಿ ಪಡಿಸುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.




