ಬ್ಯಾಂಕ್ ಮ್ಯಾನೇಜರ್, ಪೊಲೀಸರ ಸಕಾಲಿಕ ಕಾರ್ಯಾಚರಣೆಯಲ್ಲಿ ತಪ್ಪಿದ ವಂಚನೆ…
ಮುಲ್ಕಿ : ವೃದ್ದ ದಂಪತಿಗಳನ್ನು ಡಿಜಿಟಲ್ ಅರೆಸ್ಟ್ ನಲ್ಲಿಟ್ಟು ಅವರಿಂದ ಬರೋಬ್ಬರಿ 84 ಲಕ್ಷ ಹಣ ದೋಚಲು ಯತ್ನಿಸಿದ ಸೈಬರ್ ವಂಚಕರ ವಂಚನೆಯನ್ನು ಕೆನರಾ ಬ್ಯಾಂಕ್ ಮ್ಯಾನೆಜರ್ ಮತ್ತು ಮುಲ್ಕಿ ಪೊಲೀಸರು ತಪ್ಪಿಸಿದ್ದಾರೆ.
ದಾಮಸ್ ಕಟ್ಟೆ ಕೊಲ್ಬೆಟ್ಟು ಎಂಬಲ್ಲಿನ ವೃದ್ಧ ದಂಪತಿ ಬೆನೆಡಿಕ್ಟ್ ಫೆರ್ನಾಂಡಿಸ್(84) ಹಾಗೂ ಅವರ ಪತ್ನಿ ಲಿಲ್ಲಿ ಫೆರ್ನಾಂಡಿಸ್(71)ರಿಗೆ ಸೋಮವಾರ ವಾಟ್ಸ್ಆ್ಯಪ್ ಮೂಲಕ ವೀಡಿಯೊ ಕರೆಯೊಂದು ಬಂದಿದೆ. ಕರೆ ಮಾಡಿದ ವಂಚಕರು ಉತ್ತರ ಪ್ರದೇಶದ ಸಿಐಡಿ ಪೊಲೀಸರು ಎಂದು ಹೇಳಿದ್ದಾರೆ. ಬಳಿಕ ವೃದ್ದ ದಂಪತಿಗಳಿಗೆ ನೀವು ಮುಂಬೈನ ಬ್ಯಾಂಕ್ ಖಾತೆಯಿಂದ ಆರು ಕೋಟಿ ರೂ. ಡ್ರಾ ಮಾಡಿ ವಂಚಿಸಿದ್ದೀರಿ. ನಿಮ್ಮ ವಿರುದ್ಧ ವಂಚನೆ ಕೇಸು ದಾಖಲಾಗಿದೆ. ಆ ಹಣವನ್ನು ಹಿಂದಿರುಗಿಸಬೇಕು. ಹಣ ನೀಡುವವರೆಗೆ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಡಿಜಿಟಲ್ ಅರೆಸ್ಟ್ನಿಂದ ತಪ್ಪಿಸಿಕೊಳ್ಳಲು ಯೋಚಿಸಬೇಡಿ. ಒಂದು ವೇಳೆ ಮನೆಯಿಂದ ಹೊರ ಬಂದರೆ ನಮ್ಮ ಸಿಬ್ಬಂದಿ ನಿಮ್ಮನ್ನು ಗುಂಡಿಕ್ಕಿ ಕೊಲ್ಲುತ್ತಾರೆ. ತಮ್ಮ ಖಾತೆಯಲ್ಲಿರುವ 84 ಲಕ್ಷ ರೂ.ನ್ನು ತಕ್ಷಣಕ್ಕೆ ವರ್ಗಾಯಿಸಬೇಕು ಎಂದು ಬೆದರಿಕೆ ಹಾಕಿದ್ದರು.
ಇದರಿಂದ ವಿಚಲಿತರಾದ ದಂಪತಿ ಬುಧವಾರ ಕಿನ್ನಿಗೋಳಿಯ ಕೆನರಾ ಬ್ಯಾಂಕ್ಗೆ ತೆರಳಿ ತಮ್ಮ ಎಫ್ಡಿ ಖಾತೆಯಲ್ಲಿರುವ 84 ಲಕ್ಷ ರೂ.ವನ್ನು ವಂಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಬ್ಯಾಂಕ್ ಮ್ಯಾನೇಜರ್ರ ಕೇಳಿದ್ದಾರೆ. ಆದರೆ ಬ್ಯಾಂಕ್ ಮ್ಯಾನೆಜರ್ ಅಷ್ಟು ದೊಡ್ಡ ವರ್ಗಾವಣೆಗೆ ಬಗ್ಗೆ ಕೇಳಿದಾಗ ಸರಿಯಾದ ಉತ್ತರ ನೀಡಿಲ್ಲ. ಹೀಗಾಗಿ ಸಂಶಯಗೊಂಡ ಬ್ಯಾಂಕ್ ಮ್ಯಾನೇಜರ್ ವಂಚಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡರಲಿಲ್ಲ, ಅಲ್ಲದೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸರು ವೃದ್ಧ ದಂಪತಿಯ ಮನೆಗೆ ತೆರಳಿ ಅವರ ಮೊಬೈಲ್ ಫೋನ್ನನ್ನು ಪರಿಶೀಲಿಸಿದಾಗ ಅವರು ಡಿಜಿಟಲ್ ಅರೆಸ್ಟ್ಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಬ್ಯಾಂಕ್ ಮ್ಯಾನೇಜರ್ರಿಗೆ ಕರೆ ಮಾಡಿ ವಿಚಾರ ತಿಳಿಸಿ ದಂಪತಿ ನೀಡಿರುವ ವಂಚಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡದಂತೆ ಸೂಚಿಸಿದ್ದಾರೆ.
ಈ ಬಗ್ಗೆ ಮುಲ್ಕಿ ಠಾಣಾ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಯಿಸ್ಟನ್ರ ಸಮಯಪ್ರಜ್ಞೆ ಮತ್ತು ಮುಲ್ಕಿ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ವೃದ್ಧ ದಂಪತಿ ಲಕ್ಷಾಂತರ ರೂ. ವಂಚನೆಗೊಳಗಾಗುವುದು ತಪ್ಪಿದೆ.



